Friday, July 15, 2011

ಸಖೀಗೀತ

ಸಖೀ...
ನಾನು ನಿರೀಕ್ಷಿಸುತ್ತಿದ್ದೇನೆ
ನಮ್ಮಿಬ್ಬರ ಮಿಲನವನ್ನು
ಹನಿ ಪ್ರೀತಿಗೂ ಬರಗೆಟ್ಟವನಂತೆ
ಕಾಯುತ್ತಿದ್ದೇನೆ ನಿನ್ನ ಬರವನ್ನು....

ವಿರಹದ ಉರಿಗೆ ಮನಸು ಕಲ್ಲಾಗಿಸಿ
ನಮ್ಮ ಪ್ರೀತಿಗೆ ಕವಚ ತೊಡಿಸಿ
ಕಾಯುತ್ತಿದ್ದೇನೆ ನಾನು
ಶಾಪಗ್ರಸ್ಥ ಅಹಲ್ಯೆಯಂತೆ....

ನಿನ್ನೊಂದಿಗೆ ಕಳೆದಿರುವ ಕ್ಷಣಗಳ
ಸವಿನೆನಪುಗಳಲಿ ಲೀನವಾಗಿ
ಕಾಯುತ್ತಿದ್ದೇನೆ ನಾನು
ಅಶೋಕವನದ ಸೀತೆಯಂತೆ....

ಕಾಲಚಕ್ರದಡಿ ಹಣ್ಣಾಗಿ
ನನ್ನತನ ಕ್ಷಣ-ಕ್ಷಣವೂ ಕರಗಿಹೋಗಿ
ಹೃನ್ಮಗಳಲಿ ನಿನ್ನನ್ನೇ ಹೊತ್ತು
ಕಾಯುತ್ತಿದ್ದೇನೆ ನಾನು ಶಬರಿಯಂತೆ....

ಸಖೀ....
ನಿನ್ನನ್ನು ನನ್ನೊಳಗೇ ಅವಿತಿಟ್ಟುಕೊಂಡು
ಕಳೆದುಹೋಗಿರುವ ನನ್ನನು
ನಿನ್ನ ಕಣ್ಣಾಲಿಗಳಲಿ ಕಾಣಲು
ನಾನು ಕಾಯುತ್ತಿದ್ದೇನೆ ನಿನಗಾಗಿ....

Tuesday, July 12, 2011

ಹಾಗೇ ಸುಮ್ಮನೇ......


ವಸುಂಧರೆಯ ಒಡಲಿನಿಂದ
ಈಗ ತಾನೆ ಜನ್ಮಿಸಿದ
ಕೂಸಿನ ಅಳು ಕರೆಯುತಿದೆ
ಅರಳಿರುವ ಮೊಗ್ಗಿನ
ಪರಿಮಳವು ಸೆಳೆಯುವಂತೆ


ಇಲ್ಲಿ ಬಿರುಬಿಸಿಲು
ಬಾಯಾರಿದ ಭೂಮಿ
ನಿಟ್ಟುಸಿರಿನ ಬೇಗೆ
ಜಗವೊಂದೇ ಆದರೂ
ಅಲ್ಲಲ್ಲಿ ಬೆಳಗುತಿದೆ ಹಸಿರು


ಜಗವನೆಲ್ಲ ಬೆಳಗುವ
ಹಗಲೂ ಇಲ್ಲಿದೆ
ತೂಕಡಿಸುವ ಜನವ ತೂಗುವ
ಇರುಳೂ ಇಲ್ಲಿದೆ
ಎಲ್ಲವೂ ಭಾಸ್ಕರನ ಬಯಲಾಟ


ದುಡಿಮೆಯ ಅರಸುತ್ತ
ಓಡುವ ಜನಗಳು
ಬೊಜ್ಜು ಕರಗಿಸಲೂ
ಓಡುವ ಜನಗಳು
ಜೀವನ ನಿಲ್ಲದ ಪಯಣ


ಬೆನ್ನಿಗೆ ತಗುಲಿರುವ ಹೊಟ್ಟೆ
ಬಸಿರು ತುಂಬಿರುವ
ಹೊಟ್ಟೆಯ ಭಾರದಿ
ಬಳಲುವ ಬೆನ್ನೆಲುಬು
ಹೊಟ್ಟೆಪಾಡಿನ ಜೀವನ

ಸಖೀಗೀತ

ಸಖೀ...

ಎನ್ನ ಮನವು ಹೀಗೆಯೇ
ನಿನ್ನ ನೆನಪಿನಲ್ಲಿಯೇ
ಪುಳಕಗೊಳ್ಳುತ್ತದೆ


ಮೊಗ್ಗು ಹೂವಾಗಿ ಅರಳುವ ತೆರದಿ
ಮೊಳಕೆಯೊಡೆಯುವ ನೆನಪು
ಸಂಪೂರ್ಣವಾಗಿ ಆವರಿಸಿಬಿಡುತ್ತದೆ
ಹೂವಿನ ಪರಿಮಳದಂತೆ

ಅರುಣೋದಯದಿ ಮೆಲ್ಲಗೆ ಬೀಸುವ
ಮಂದ ಮಾರುತದಂತೆ
ನಿನ್ನ ನೆನಪಿನಲ್ಲಿಯೇ
ಮನವು ಮುದಗೊಳ್ಳುತ್ತದೆ


ಹೂದೋಟದಿ ಮಕರಂದ ಹೀರಿ
ಹೂವಿನ ಸುತ್ತ ನರ್ತಿಸುವ ದುಂಬಿಯಂತೆ
ನನ್ನ ಅಂತರಂಗ
ನಿನ್ನ ನೆನಪಿನ ಸುಳಿಯಲ್ಲಿ ಸುಳಿದಾಡುತ್ತದೆ


ಅಲ್ಲಿ-ಇಲ್ಲಿ ಉಲಿಯುವ
ಮಧುರ ಕಂಠಗಳಲಿ
ನಿನ್ನ ನುಡಿಯೇ ಎನ್ನ ಕಿವಿಗಳಲಿ
ಒಡಮೂಡಿಸುತ ಪುಳಕಗೊಳ್ಳುತ್ತದೆ


ದಡವನಪ್ಪುವ ಸಾಗರದ
ತೆರೆಗಳ ತೆರದಿ
ಮತ್ತೆ-ಮತ್ತೆ ಮರುಕಳಿಸಿ
ಎನ್ನ ಹೃದಯವನು ಮುತ್ತಿಕ್ಕುತ್ತದೆ

ಅಳಲು

ಮೂಲೆಯಲ್ಲಿ ಇಟ್ಟಿರುವ

ಒರಳು ಕಲ್ಲು
ನಿಶ್ಚಲದಿ ನಿಂತಿರುವ ಒನಕೆ
ಹಳೆಯ ನೆನಪುಗಳ
ಪಳೆಯುಳಿಕೆಯಂತೆ
ಮನವು ಜಡವಾಗಿದೆ


ಹೊಸ-ಹೊಸ ಆವಿಷ್ಕಾರಗಳು
ನೂರಾರು ಸಲಕರಣೆಗಳು
ಗುಂಡಿ ಒತ್ತಿದರೆ
ಕ್ಷಣಮಾತ್ರದಲಿ ಸಿಗುವ
ಸೌಕರ್ಯಗಳು
ನನ್ನೆಡೆಗೆ ಕಣ್ಣೆತ್ತಿಯೂ
ನೋಡದಂತೆ ಮಾಡಿವೆ


ಹಬ್ಬ-ಹರಿದಿನಗಳಲಿ ಪೂಜೆ
ಮನೆಯ ಮಹಾಲಕ್ಷ್ಮಿಯ ಪಟ್ಟ
ಧೂಫ ದೀಪವ ಬೆಳಗಿ
ಮತ್ತೆ ನಾಮವನು ಬಳಿದು
ಮತ್ತೊಂದು ಹಬ್ಬ ಬರುವವರೆಗೆ
ಮರೆತುಬಿಡುವರು ಎನ್ನ


ಎತ್ತುವುದು, ಕುಟ್ಟುವುದು
ಯಾರಿಗೂ ಇಲ್ಲ ಮನಸು
ಗುಂಡಿ ಒತ್ತುವುದರಲ್ಲಿಯೇ
ಅವರ ಮನಸು
ಹುಚ್ಚು ಕುದುರೆಯನೇರಿದ ಅವಸರ
ಎಲ್ಲರಿಗೂ ಹೊಸತನದ ಹಂಬಲ
ಹೊಸದಕ್ಕೇ ಬೆಂಬಲ

ಸಖೀಗೀತ

ಸಖೀ....
ನಿನ್ನ ಪ್ರೇಮದ ನೋಟವೊಂದು
ಹುಲ್ಲು-ಗರಿಕೆಯ ಅಂಚಿನಲಿ
ಇಬ್ಬನಿಯ ಬಿಂದುಗಳಲಿ
ಹೊಳೆವ ಸೂರ್ಯರಶ್ಮಿಯ ಭಾವ


ಅರಳಿರುವ ಹೂವಿನ ಸುತ್ತ
ಸುಳಿದಾಡುವ ಭ್ರಮರದಂತೆ
ಅನುಗಾಲ ಮನದಲ್ಲಿ
ನನ್ನ-ನಿನ್ನ ಸರಸಗಾನ


ಬಂಡೆಗಲ್ಲುಗಳ ಬಳಸಿ
ಮೆಲ್ಲಗೆ ಹರಿಯುವ ತೊರೆಯ
ಜುಳು-ಜುಳು ನೀನಾದದಂತೆ
ಮಿಡಿಯುವುದು ಹೃದಯ ನಿನಗಾಗಿ


ಹುಣ್ಣಿಮೆಯ ರಾತ್ರಿಯಲಿ
ಹಾಲು ಸುರಿದಂತೆ ಹರಡಿರುವ
ಚಂದ್ರಿಕೆಯ ಸಂಭ್ರಮದ ತೆರದಿ
ಹೃದಯದಲಿ ಬೆಳಗುವುದು ನಿನ್ನ ಪ್ರೇಮಜ್ಯೋತಿ

ಕನಸುಗಳು

ಈ ಕನಸುಗಳೇ ಹೀಗೆ
ಮನಸ್ಸಿಗೆ ಮುದ ನೀಡುತ್ತವೆ
ಕತ್ತಲೆಯ ಕಪ್ಪಿಗೆ ಬಣ್ಣ ಬಳಿದು
ರಂಗಿನ ಲೋಕ ತೋರಿಸುತ್ತವೆ

ಕನಸುಗಳೇ ಹೀಗೆ
ಇರಲಾರದ ಸಾಮಾಜ್ಯ ತೋರಿ
ದೊರೆಯಂತೆ ನಮಗೆ
ಮೆರೆಯಲು ಅವಕಾಶವೀಯುತ್ತವೆ


ಸೂರ್ಯಕಾಂತಿಯ ಬೆಳಕಿನಲ್ಲಿ
ಕೈಗೂಡದಿರುವ ಬಯಕೆಗಳು ಸೇರಿ
ಸಪ್ತವರ್ಣದ ಕಾಮನಬಿಲ್ಲೂ ನಾಚುವಂತೆ
ವರ್ಣಮಯ ಲೋಕ ತೋರಿಸುತ್ತವೆ


ಕನಸುಗಳೇ ಹೀಗೆ
ಕೈ-ಹಿಡಿದಾಕೆ ಪಕ್ಕದಲ್ಲಿದ್ದರೂ
ರಂಭೆ-ಊರ್ವಸಿಯರನ್ನೂ ನಾಚಿಸುವ
ಲಲನೆಯರೊಂದಿಗೆ ಲಲ್ಲೆಹೊಡೆಯುತ್ತವೆ


ಕನಸುಗಳೇ ಹೀಗೆ
ಕಣ್ಣು ಮುಚ್ಚಿದ್ದರೂ, ತ್ರಿಲೋಕ ದರ್ಶನ ನೀಡಿ
ಮನಸಿಗೆ ಮುದಗೊಳಿಸುತ
ನನಸಾಗಿಸಲು ಪ್ರೇರೇಪಿರುತ್ತವೆ


ಕನಸುಗಳು ಹೀಗೆಯೇ ಎನ್ನಲಾಗದು
ಭಯಂಕರ ಧೈರ್ಯದ ಮನುಜ
ಬೆಚ್ಚಿ-ಬೆದರಿ ಚೀತ್ಕರಿಸುವಂತೆ
ಭಯಾನಕ ಲೋಕವನ್ನೂ ತೋರುತ್ತವೆ

ಸಖೀಗೀತ

ನಾನಿಲ್ಲದೇ ಇರುವಾಗ
ಹೇಗಿದ್ದೆ ನಲ್ಲ
ನನ್ನ ವಿರಹದ ನೋವು ...
ಅಗಲಿಕೆಯ ನಿಟ್ಟುಸಿರು
ಬಾಧಿಸಿತೇ ನಿನ್ನ ಮನಕೆ
ಹಲವು ದಿನಗಳ ನಂತರ
ನನ್ನವಳು ಕಣ್ಣುಗಳಲ್ಲೀಯೇ
ಕುಡಿನೋಟದಿಂದ ಕೇಳಿದ್ದು


ಸಖೀ
ನೀ ನಿಲ್ಲದೇ ಹೋದರೆ
ನೀನು ನಿಲ್ಲದೇ ದೂರ ಹೋದರೆ
ನಾನೂ ನಿನ್ನೊಡನಿದ್ದೆ
ಅನುಕ್ಷಣವೂ ನಿನ್ನ
ಉಸಿರಿನಲ್ಲಿ ಉಸಿರಾಗಿ
ಹೃದಯದ ಮಿಡಿತವಾಗಿ
ನಿನ್ನೊಳಗೇ ಕರಗಿ ಹೋಗಿದ್ದೆ


ನೀನಿಲ್ಲದಿರುವಾದ ಎನ್ನಲು
ನೀನೆಲ್ಲಿ ಹೋಗಿದ್ದೆ ಸಖೀ
ನಿನ್ನ ಸವಿ-ನೆನಪುಗಳ ಸುಳಿಯಲ್ಲಿ
ನನ್ನನ್ನೂ ಸೆಳೆದುಕೊಂಡಿದ್ದೆ
ಎನ್ನ ಮನದಲ್ಲಿ
ಪಿಸುಮಾತು ಹೇಳುತ್ತ
ನನ್ನೊಡನೆಯೇ ಇದ್ದೆ ನೀನು


ಕಣ್ಣ ರೆಪ್ಪೆಗಳ ಅಡಿಯಲ್ಲಿ ಕುಳಿತು
ಕಣ್ಣು ಮುಚ್ಚಿದಾಗಲೋಮ್ಮೆ
ನಿನ್ನಿರವ ತೋರುತ ಮುದಗೊಳಿಸುತ್ತಿದ್ದೆ
ಹೃದಯವು ಮಿಡಿಯುವ
ಒಂದೊಂದು ಮಿಡಿತದಲಿ ಮಿಳಿತಗೊಂಡು
ಪಂಚಮದಲ್ಲಿ ಪ್ರೇಮರಾಗವ ನುಡಿಸುತ್ತಿದ್ದೆ
ನೀನು ನನ್ನೊಳಗಿಂದ ಹೋಗಲೇ ಇಲ್ಲ
ನಾನು ಕೊನೆಯುಸಿರೆಳೆಯುವ ವರೆಗೆ
ನೀನೆಲ್ಲಿಗೂ ಹೋಗುವುದಿಲ್ಲ

ಎಣಿಕೆ

ಜೀವನದಿ ಕಳೆದಿರುವ
ಕ್ಷಣಗಳನ್ನು ಕಣ್ಣೀರಿನ ಹನಿಗಳಿಂದ ಎಣಿಸಬೇಡ
ನಿನ್ನಿಂದ ನಕ್ಕು ನಲಿದಿರುವ ಸ್ನೇಹಿತರ
ಸಂತಸದ ಘಳಿಗೆಗಳಿಂದ ಎಣಿಸು

ಬಾಳ ಮುಸ್ಸಂಜೆಯಲಿ
ಆಯುಷ್ಯವನ್ನು ವರ್ಷಗಳಿಂದ ಅಳೆಯಬೇಡ
ಜೀವನದಾದ್ಯಂತ ಗಳಿಸಿರುವ
ಸ್ನೇಹಿತರ ಸಂಖ್ಯೆಯೊಡನೆ ಎಣಿಸು

ನಿನ್ನ ಕತ್ತಲೆಯ ಕ್ಷಣಗಳನ್ನು
ಅಂಧಕಾರದ ನೆರಳುಗಳಿಂದ ಎಣಿಸಬೇಡ
ಕಾರಿರುಳಿನಲ್ಲಿ ಬೆಳಗುತ್ತಿರುವ
ತಾರೆಗಳ ಸಂಖ್ಯೆಯೊಡನೆ ಎಣಿಸು

ನಿನ್ನ ದಿನಗಳನ್ನು
ಸೂರ್ಯರಶ್ಮಿಯ ಹೊಂಗಿರಣಗಳಿಂದ ಎಣಿಸು
ಆಗಸದಿ ಕವಿದಿರುವ
ಕಾರ್ಮೋಡಗಳ ಮರೆತು

ನಿನ್ನ ತೋಟದ ಅಂದವನು
ಅರಳಿರುವ ಸುಂದರವಾದ
ಹೂಗಳ ನೋಡಿ ಎಣಿಸು
ಉದುರುತ್ತಿರುವ ಎಲೆಗಳನ್ನು ಮರೆತು

ಸಖೀಗೀತ

ಅಂದು ಅವಳು
ಇದೇ ದಾರಿಯಲ್ಲಿ
ಬರುತ್ತಿದ್ದಳು ಮೆಲ್ಲಗೆ...
ಮಂದಗಮನೆಯಾಗಿ
ಮಲ್ಲಿಗೆ ಅರಳಿದಂತೆ
ಅವಳ ಮುಗುಳ್ನಗು
ಎನ್ನ ಹೃದಯ ಅರಳುತ್ತಿತ್ತು
ತಂಗಾಳಿ ಸೋಕಿದಂತೆ
ಮನದಲ್ಲಿ ಮಂದಹಾಸ


ಇಂದು ಅವಳು
ಎನ್ನ ಮನೋಮಂದಿರದಲ್ಲಿ
ಚಿರ ಸ್ಥಾಯಿಯಾಗಿಹಳು
ಮನದಲ್ಲೆಲ್ಲಾ ಬೆಳದಿಂಗಳು
ಹೃನ್ಮಗಳಲ್ಲಿ ಅವಳದೇ ರಾಗ
ಅವಳು ನೆಲೆಸಿದ ಮೇಲೆ
ನಾನು, ನನ್ನತನ ಎಲ್ಲವೂ
ಅವಳೊಂದಿಗೆ ಲೀನವಾಗಿ
ಬಾಳಲಿ ಮೊಳಗಿದೆ ತೋಂ.....ತನ

ಸಖೀ ಗೀತ

ಸಖೀ.....
ನೀನಿಲ್ಲದೇ ನಾನು
ಎಲ್ಲವನ್ನೂ ಕಳೆದುಕೊಂಡಿದ್ದೇನೆ...
ನಿನ್ನ ನೆನಪಿನಲ್ಲಿಯೇ
ನಾನೂ ಕಳೆದುಹೋಗಿದ್ದೇನೆ

ಶೂನ್ಯವನ್ನೇ ದೃಷ್ಟಿಸುವ
ನನ್ನ ಕಂಗಳು
ಶೂನ್ಯದಿಂದಲೂ ನಿನ್ನನ್ನು
ಬಗೆದು ತೆಗೆಯುತ್ತವೆ
ಕಣ್ಮುಂದೆ ನಿನ್ನದೇ ಪ್ರತಿರೂಪ


ಬಿಳಿ ಹಾಳೆಗಳ ಮೇಲೆ
ನೀನು ಚೆಲ್ಲಿರುವ ಶಾಯಿ ಗುರುತು
ಅದನ್ನೇ ಆಚೀಚೆ ಎಳೆದು
ಚಿತ್ರವನ್ನಾಗಿಸುವ ಎನ್ನ ಆಶಯ
ಮನದಲ್ಲಿ ನೂರೆಂಟು ಚಿತ್ರಗಳು


ಅಲ್ಲಿ-ಇಲ್ಲಿ ಹೋಗಿ ಬರುವವರ
ಸರಸರ ಸದ್ದು, ಹೆಂಗಳೆಯರ ಪಿಸುಮಾತು
ಕೈ-ಬಳೆ ಕಾಲ್ಗೆಜ್ಜೆಗಳ ನೀನಾದ
ನೀ ಮುಡಿದಾ ಮಲ್ಲಿಗೆಯ ಕಂಪು
ಸದಾ ನಿನ್ನದೇ ಕನವರಿಕೆ


ಸಖೀ ಬೇಗ ಬಾ
ಕಳೆದು ಹೋಗಿರುವ
ನನ್ನ ಇರವನ್ನು ತೋರು ಬಾ .....

ಅವಳು

ಸಮಾರಂಭದ ನಡುವೆ
ರಂಭೆಯಂತ ಸುಂದರಿ
ನಾಚಿಕೆಯೇ ಮೈವೆತ್ತಂತೆ ಕುಳಿತಿದ್ದಳು...
ತಲೆ ಎತ್ತಿ ನೋಡುವುದಿರಲಿ
ಮುಖವನ್ನೇ ನೆಲದಾಳಕ್ಕಿಳಿಸಿದಂತೆ
ಅವಳ ಹಾವ-ಭಾವ
ಆಗಾಗ ಮುಖದಲ್ಲಿ ಮೂಡುವ
ಅವಳ ಮಂದಹಾಸ
ಅಯ್ಯೋ ದೇವ್ರೇ ಈ ಕಾಲದಲ್ಲಿ
ಹೀಗೂ..... ಉಂಟೇ
ಅಂತ
ಹತ್ತಿರದಲ್ಲಿ ಹೋಗಿ ಇಣುಕಿ ನೋಡಿದರೆ
ಸುಂದರವಾದ ಅವಳ
ಕೈಬೆರಳುಗಳು
ಮೋಬೈಲ್ ಕೀಗಳ ಮೇಲೆ ನಲಿದಾಡುತ್ತಿವೆ
ಮೆಸೇಜುಗಳ ಪ್ರವಾಹದಲ್ಲಿ
ಅವಳು ಕೊಚ್ಚಿಹೋಗಿದ್ದಾಳೆ
ತನ್ನ ಇರುವಿಕೆಯನ್ನೇ ಮರೆತಂತೆ......

ದಾರಿ

ಭೂಮಿಯ ಮೇಲೆಲ್ಲಾ
ಗೆರೆ ಕೊರೆದಂತೆ ಕಾಣುವ ದಾರಿ
ನೇರವಾಗಿ, ಅಂಕು-ಡೊಂಕಾಗಿ...
ಜೇಡರ ಬಲೆಯಂತೆ
ನಡೆದವರ ಜಾಡು ದಾರಿಯೂ ಅರಿಯದು

ಅಲ್ಲಿ ಕೈಬೀಸಿ ಕರೆದವರ
ಕಾಯುತ್ತ ನಿಂತವರೂ ಇದ್ದರೂ
ಮುಂದೆ ಸಾಗದ ಅಸಹಾಯಕರಿಗೆ
ಕೈನೀಡಿ ಕರೆದೊಯ್ಯುವವರೂ ಇದ್ದರು
ಇದ್ಯಾವುದರ ಪರಿವೇ ಇಲ್ಲದಂತೆ
ಬಿದ್ದಿದೆ ದಾರಿ ಬಯಲಿನಲ್ಲಿ
ಸಂದಿ-ಗೊಂದಿಗಳಲ್ಲಿ


ಗೌತಮ ಮಧ್ಯರಾತ್ರಿಯಲಿ
ಎದ್ದು ಹೋಗಿದ್ದು ಇಲ್ಲಿಂದಲೇ
ಸೀತೆಯನು ಕದ್ದೊಯ್ದ ರಾವಣ
ರಾವಣನ ಅರಸುತ್ತ
ಸಾಗರೋಲ್ಲಂಘನ ಗೈದ ಹನುಮ
ದಾರಿಯನು ಗಮಿಸುತ್ತಲೇ
ಅಹಲ್ಯೆಯ ಶಾಪವಿಮೋಚನೆ
ಮಾಡಿದ ಮರ್ಯಾದಾಪುರುಷೋತ್ತಮ
ಎಲ್ಲರೂ ನಡೆದರು ಅವರವರ ದಾರಿಯಲಿ...

ನಡೆದವರು, ಮುನ್ನುಗ್ಗಿದವರು
ಮುಂದೆ ಸಾಗಿ ಗಮ್ಯ ಸೇರಿದರು
ಕಸಿವಿಸಿಯಿಂದ ಅಳುಕುತ್ತ, ತೆವಳುತ್ತ
ಸಾಗುವವರು, ಕವಲು ದಾರಿಯಲಿ ನಿಂತವರು
ಅಲ್ಲಲ್ಲಿ ಕಪ್ಪುಚುಕ್ಕೆಯಂತೆ ಗೋಚರಿಸುತಿಹರು
ಗಮಿಸಬೇಕು ದೂರವ
ನಿರ್ಗಮಿಸಬೇಕು ಗಮ್ಯದೆಡೆಗೆ......

ಮಾತುಗಳು

ಮಾತುಗಳು ಮಾತುಗಳು...ಅವೇ ಪದಗಳು......
ಪದಗಳ ಮೋಡಿ ಮರುಳಾಗಿಸುತ್ತೆ
ಪದಗಳು ಅವುಗಳೇ ಆದರೂ
ಭಾವಗಳು ಬೇರೆ-ಬೇರೆ
ಜೀವನದ ತುಡಿತದಲ್ಲಿ
ಪ್ರೇಮಭಾವ ಅರಳುವ ಹೂವಿನಂತೆ
ಸದ್ದಿಲ್ಲದೇ ಬಂದು
ಆವರಿಸುವ ಪರಿಮಳದಂತೆ


ಪದಗಳು
ಮೊನಚಾದ ಚೂರಿಯಂತೆ
ಒಮ್ಮೊಮ್ಮೆ ಹೃದಯವನ್ನು ಇರಿಯುತ್ತವೆ
ಪದಗಳು ಅವುಗಳೇ ಆದರೂ
ತಾತ್ಪರ್ಯ ಬೇರೆಯಾಗಿರುತ್ತೆ
ಆದರೂ ಬೇಕು ಸಂವಹನ
ಪದಗಳೂ ಬೇಕು ಆದರೆ ಎಲ್ಲಿಯವರೆಗೆ ?


ಕಣ್ಣುಗಳು ಮಾತನಾಡಿದರೆ
ನೋಡಿದಾ ಕ್ಷಣ ಅರಿಯುವಂತಾದರೇ
ಧ್ವನಿಯಲ್ಲಿನ ಭಾವವನ್ನು ಗ್ರಹಿಸುವಂತಾದರೇ
"ನಂಬಿಕೆ" ಎಂಬ ಮೂರೂವರೆ ಅಕ್ಷರ
"ಪ್ರೇಮ" ಮತ್ತು "ಪ್ರೀತಿ"ಯಲ್ಲಿ
ಆಳವಾಗಿ ಬೇರೂರಿದರೆ....
ಪದಗಳಿಗೆ ಅನರ್ಥವಿಲ್ಲ
ಬಾಳು ಸುಂದರವಾದ ಕವಿತೆಯಂತೆ

ಸಖೀಗೀತ

ಸಖೀ....
ಅದೇ ಕಲ್ಲುಬಂಡೆ
ಅಂದು ನಾವಿಬ್ಬರೂ...
ಕುಳಿತು ನಮ್ಮ ಜೀವನದ
ಕನಸುಗಳ ಕಟ್ಟಿದ್ದು
ತಂಗಾಳಿಯಲ್ಲಿ ತೇಲಿಹೋಗಿ
ಮೇಘಗಳ ನಡುವೆ ಮನೆಮಾಡಿದ್ದು

ಸುತ್ತಲೂ ಚೆಲ್ಲಿದ ಹಸಿರು
ಮೊಳಕೆಯೊಡೆದಿಹ ಪ್ರೀತಿಯಿಂದ
ನಮ್ಮ ಬಾಳು ಬಸಿರು ಕಟ್ಟಿದ್ದು
ಪಿಸುಮಾತಿನಲ್ಲಿ ನೀನು
ಅಂದು ಉಸಿರಿದ ಪ್ರೇಮಮಂತ್ರ
ಇಂದಿಗೂ ಕಿವಿಯಲ್ಲಿ ಮೊಳಗುತ್ತಿದೆ


ಬೆಟ್ಟದ ತುದಿಯ
ಬೋಳು ಬಂಡೆಯ ಮೇಲೆ
ಪ್ರೀತಿಯನೇ ಉಸಿರಾಡುತ್ತ ಕುಳಿತ ನಾವು
ಜಗವನ್ನೇ ಗೆದ್ದ ಸಂಭ್ರಮದಲ್ಲಿ
ಮನದಲ್ಲಿಯೇ ಕಟ್ಟಿದೆವು
ನೂರು-ಸಾವಿರ ಕನಸುಗಳ


ನೀನಿಲ್ಲದ ಈ ಸಂಜೆಯಲಿ
ಬೆಟ್ಟದ ತುದಿಯಲ್ಲಿ ನಿಂತು
ನಮ್ಮ ಪ್ರೀತಿಗೆ ಮುನ್ನುಡಿ ಬರೆದ
ಬಂಡೆಯನು ನೋಡುತಿರುವೆ
ಅಂದು ಮನಸಲ್ಲೇ ಚಿತ್ರಿಸಿದ ಜೀವನ
ಇಂದು ಹಸಿರಾಗಿ ಹರಡಿದೆ
ಶಿಲಾಶಾಸನವನ್ನೂ ಮೀರಿ
ಅಜರಾಮರವಾಗಿ ನಿಂತಿದೆ ನಮ್ಮ ಪ್ರೀತಿ.....