Monday, December 27, 2010

ಕಾಮನೆಗಳ ಸುಳಿಯಲ್ಲಿ

ದಪ್ಪ ಜಡೆ
ಸಣ್ಣ ನಡು
ಬಳುಕುವ ಸೊಂಟ
ಕಂಡೊಡನೆ
ಮನದಲ್ಲಿ ಕಾಮನೆಗಳು
ಭುಗಿಲೇಳುತ್ತವೆ.

ವಯ್ಯಾರಿಯ
ಕುಡಿನೋಟಕೆ
ತುಂಟ ನಗುವಿಗೆ
ಬಿಂಕದ ಮಾತುಗಳಿಗೆ
ಮನಸು
ಹಪಹಪಿಸುತ್ತದೆ

ಜೀವನದಲ್ಲಿ
ಹಲವು ವಸಂತಗಳು
ಕಳೆದರೂ
ಮನದಲ್ಲಿ ತಲ್ಲಣ
ಕಾಮನೆಗಳ
ಕೋಲಾಹಲ

ಅಂತರಂಗದ

ಕಾಮನೆಗಳನ್ನೆಲ್ಲಾ ಕರಗಿಸಿ
ಕಾಲ್ಮರಿಗೆಯಾಗಿ ಧರಿಸಿ
ಜೀವನವನ್ನು
ಮೆಟ್ಟಿ ನಿಲ್ಲುವ ಗಟ್ಟಿತನ
ಎಂದು ಬರುವುದೋ
ಯಾರಿಗೆ ಗೊತ್ತು !!!!

Tuesday, December 14, 2010

ಹೊಸತು !!!

ಅನುದಿನವೂ ಮೂಡಣದಿ
ಅದೇ ಸೂರ್ಯ
ನಡೆದಾಡಲು ನಮಗೆ
ಅದೇ ಭೂಮಿ

ಹೊಸತನ್ನು ಹುಡುಕುವ
ಹುಮ್ಮಸ್ಸು, ಹಂಬಲ ಅಪಾರ
ಮನಸು ತೆರೆದುಕೊಳ್ಳುವುದಿಲ್ಲ
ಬೆಳಕಿನೆಡೆಗೆ

ಹೀಗಾಗಬಾರದಿತ್ತು
ಅದನ್ನು ಹೀಗೆ ಮಾಡಿದ್ದರೆ
ಚೆನ್ನಾಗಿತ್ತು
ಮನದಲ್ಲಿ ನೂರು ಹಳಹಳಿ

ಇದೊಂದು ಸಲ ಹೀಗೆಯೇ
ಎಂದಿನಂತಿರಲಿ
ಹೊಸತನ್ನು ಮುಂದೆ ಮಾಡೋಣ
ಹಳತು ನಮ್ಮನ್ನು ಅಗಲದು

ಅಪ್ಪಿಕೊಂಡಿದ್ದೇವೆ ಹೆಮ್ಮೆಯಿಂದ
ನಮ್ಮ ಅವಗುಣಗಳನ್ನು
ಮನಸು ಒಪ್ಪುವುದಿಲ್ಲ
ಹೊಸತಿನ ಸ್ನೇಹ, ವಯ್ಯಾರವನ್ನು

ನಾಳೆಯೆಂಬ ಅಭಯ
ಬೆನ್ನ ಹಿಂದಿರುವಾಗ
ಇಂದಿನ ಹೆಜ್ಜೆ
ಹೊಸತಿನೊಂದಿಗೆ ಸಾಗುವುದೇ ಇಲ್ಲ

Saturday, December 11, 2010

ಮೊಗ್ಗು ಅರಳುವ ಮುನ್ನ

ಮಲ್ಲಿಗೆಯ ಮೊಗ್ಗಿನ

ಗೇಣುದ್ದದ ಮಾಲೆ
ಪೂರ್ಣ ಚಂದಿರನಂತೆ
ಅರಳುವುದು ಅವಳ ಮುಖ

ಒಂದು ಸಂಪಿಗೆಯ ಹೂ
ಕಾಣುವುದೇ ತಡ
ಲವಲವಿಕೆ ಮುಖದಲ್ಲಿ
ಪ್ರೇಮಧಾರೆಯು ಮನದಲ್ಲಿ


ಕೆಂಗುಲಾಬಿಯ ಕೊಡಲು
ನಾಚಿ ಕೆಂಪಾಯಿತು
ಅವಳ ಮುಖ
ಹೂವು ಅರಳಿತು ಆಗ


ಕೇದಗೆ, ಸೇವಂತಿಗೆ, ಜಾಜಿ
ಹೂವು ಯಾವುದಾದರೇನು
ಅರಳುವುದು ಪ್ರೇಯಸಿಯ
ಹೃದಯದಲಿ

ಅರಳುವುದು ಹೃದಯ

ಹರಿಯುವುದು ಪ್ರೇಮಧಾರೆ
ಕಣ್ಣುಗಳು ಬರೆಯುವವು
ಪ್ರೇಮಕಾವ್ಯ

Sunday, December 5, 2010

ಮೌನಗೀತೆ

ಮಾತಾಡಬೇಡ ಗೆಳತಿ
ಮೌನಧಾರಿಣಿಯಾಗು

ಪ್ರೇಮವೊಂದೇ ಬಾಳಿನುಸಿರು
ಎಂದ ನಮ್ಮ ಮೊದಲ
ಭೇಟಿಯನೊಮ್ಮೆ ನೆನಪಿಸಿಕೋ


ಮುಖವೆಲ್ಲ ಕೆಂಪಾಗಿ
ಕಂಪಿಸುತ್ತಿರುವ
ನನ್ನ ಕೈಕಾಲುಗಳು


ಮರಳಧಾರೆಯಲಿ
ಏನೇನೋ ಬರೆಯುತ್ತಿರುವ
ನಿನ್ನ ಆ ಕಾಲ್ಬೆರಳುಗಳು


ಏನು ಹೇಳಲೂ
ತಿಳಿಯದೇ ತಡವರಿಸಿದ
ಆ ಮಧುರ ಕ್ಷಣಗಳು


ನಿನ್ನ ಕಣ್ಣಿನಾಳದಲ್ಲಿ
ಜಗವನ್ನೇ ಕಾಣುವ
ನನ್ನ ಕನಸುಗಳು


ನನ್ನ ಹೃದಯದಾಳಲಿ
ಮನೆಕಟ್ಟಿ ನೆಲೆಸುವ
ನಿನ್ನ ಕನಸುಗಳು


ಮನದಾಳದಲಿ
ಮತ್ತೆ ಮೊಳಕೆಯೊಡೆಯಲಿ
ಆ ನಮ್ಮ ಮೊದಲ ಪ್ರೇಮ


ನಿತ್ಯನೂತನವಾಗಲೀ
ನಮ್ಮ ಪ್ರೇಮಧಾರೆ
ಮಾತಾಡಬೇಡ ಗೆಳತಿ.....

Wednesday, October 27, 2010

ಪಯಣ

ನಾನು ನಡೆವುದೇ ಹಾದಿ


ನನ್ನದೇ ದಾರಿ
ಅವರಿವರ ಹಂಗೇಕೆ
ಅವರಿವರ ಅನುಕರಣೆ ಏಕೆ
ತೋಚಿದಂತೆ ಗೀಚುವ...
ನನ್ನ ದಾರಿಯೇ ಬೇರೆ

ಬಾಳ ಪಯಣವು
ಏಕಮುಖವಾಗಿದೆ ಎಂದೂ
ಮರಳಿ ಬಾರದು ಮತ್ತೆ
ನನ್ನ ಜೀವನ ಪಯಣದಿ

ನನ್ನ ದಾರಿಯೇ ಬೇರೆ
ಈ ಲೋಕಕೆ ಬರುವಾಗಲೂ
ನನ್ನ ದಾರಿ ಬೇರೆಯಾಗಿತ್ತು
ಮತ್ತೆ ಪರಲೋಕಕೆ
ಮರಳುವಾಗಲೂ
ವಿಧಿಯ ಸೇರುವೆ ಏಕಾಂಗಿಯಾಗಿ

Saturday, October 9, 2010

ಪ್ರೇಮ ಗಂಗೆ

ಅಂತರಾಳವ ಕವಿದಿರುವ ಮಂಜು
ವಿರಸ, ನೋವುಗಳಿಂದ ಹೆಪ್ಪುಗಟ್ಟಿದ ಮನಸ್ಸು
ಬೆಚ್ಚನೆಯ ಪ್ರೀತಿಯಿಂದ ಕರಗಬೇಕಾಗಿದೆ


ದುಗುಡ ನೋವುಗಳ ಭ್ರೂಣ ಬಿರಿದು
ಸಂತಸವು ಪ್ರಸವಿಸಲು ಸಮಯ ಸರಿಯಬೇಕು
ಹಿಮಾಲಯದೆತ್ತರದಿಂದ ಮಂಜು ಕರಗಿ
ಪ್ರೇಮ ಗಂಗೆ ಪ್ರವಹಿಸಬೇಕು


ನಮ್ಮಿಬ್ಬರ ಮಧ್ಯದಲಿ ತೆಲೆಯೆತ್ತಿರುವ
ವೈಮನಸ್ಸಿನ ಗೋಡೆಯ ಪರದೆ
ಸರಿದು ಬೆಳಕು ತೂರಿ ಬರಬೇಕು ಬಾಳಿನಲಿ
ಬಂಜರಾದ ಮನದಲಿ ಪ್ರೇಮ ಮೊಳಕೆಯೊಡೆಯಬೇಕು


ನೋವಿನ ಆಲಾಪದಲಿ
ಕಾಲ ಕಳೆಯುವವನಲ್ಲ ನಾನು
ನಿನ್ನೆಡೆಗೆ ಅಡಿಯಿಡುತ ಸಾಗುತಿರುವೆ
ಮತ್ತೆ ಮಿಲನದ ವಸಂತ ಮೂಡಿಬರಲಿ

ಸವತಿ

ನನ್ನ ಕವಿತೆಯೊಂದಿಗೆ
ಲೀನವಾಗಿ
ಭಾವ-ಭಾವನೆಗಳ ಆಳದಲಿ
ಸರಸ-ಸಲ್ಲಾಪದಲಿ ತೇಲುತ್ತ-ಮುಳುಗುತ್ತ
ತಲ್ಲೀನವಾಗಿರಲು

ಮನೆಯಾಕೆಯ ಮಾತುಗಳು
ಮನದಾಳಕೆ ಮುಟ್ಟದೆ
ಕಣ್ಣು ಕಿವಿಗಳನು ಮನದನ್ನೆಯತ್ತ
ತೆರೆದು, ಹೂಂ ಗುಟ್ಟಿ ನಡೆಯುತಿರೆ

ನನ್ನ ಸವತಿಯರ ನೆನಯುತ
ನಿಮ್ಮದೇ ಗುಂಗಿನಲಿರುತ
ನನ್ನ ಮಾತುಗಳ ಕೇಳದಿರುವ ನೀವು
ಹಿತ್ತಾಳೆ ಕಿವಿಯವರು
ಎಂದಳಾ ನನ್ನವಳು

Thursday, October 7, 2010

ದೈನಂದಿನ ಪಾಡು

ಮುಂಜಾನೆ ಹಿತವಾದ ಹೊಂಬಿಸಿಲು

ಸೂರ್ಯ ಮಾರುದ್ದ ಮೇಲೇರಿದ ಮೇಲೆ
ತಂಗಾಳಿಯು ಕರಗಿ ಹೋಗಿ
ಕಣ್ಣುಗಳಲಿ ಕತ್ತಲೆ ಬರಿಸುವ ಉರಿಬಿಸಿಲು

ಹಾಗೋ ಹೀಗೋ ನೆರಳಿನಾಸರೆ ಪಡೆದು
ವಿಶ್ರಮಿಸುವ ಹೊತ್ತಿಗೆ
ಧುತ್ತೆಂದು ತುಂತುರು ಮಳೆಯಿಂದ
ಪ್ರತ್ಯಕ್ಷನಾಗುವ ವರುಣ

ರೈತನ ಒಡಲಿನಲ್ಲಿ ಉರಿಯೆಬ್ಬಿಸುವಂತೆ
ಧಾರಾಕಾರವಾಗಿ ಸುರಿಯುವನು
ಬಡವರ ಗುಡಿಸಿಲು, ಮನೆಗಳಲ್ಲಿ
ಎಲ್ಲಿ ನೋಡಿದಲ್ಲಲ್ಲಿ ನೀರೋ-ನೀರು


ತೊಳೆದು ಹೋಗುವುದು
ಕೊಳೆಗೇರಿಗಳ ಕೊಳೆಯು
ಹಾಗೇ ಅಲ್ಲಲ್ಲಿ ಕೂಡಿಟ್ಟಿರುವ
ಬಡ-ಬಗ್ಗರ ಬಟ್ಟೆ-ಬರೆ, ಧಾನ್ಯ

ದಿನವೆಲ್ಲ ತುತ್ತು ಕೂಳಿಗಾಗಿ ದುಡಿದು
ದಣಿದ ದೇಹವನು ಹಾಸಿಗೆಯಲ್ಲಿ ಎಸೆಯುವ
ನೆಮ್ಮದಿಯೂ ಹರಿದುಹೋಗುವುದು
ವರುಣನ ಪ್ರವಾಹದಲ್ಲಿ

Monday, September 27, 2010

ತೂರಿ ಬಂದ ಕಲ್ಲು

ಎಲ್ಲಿಂದಲೋ
ತೂರಿ ಬಂದ ಕಲ್ಲು
ಅಂತರಂಗವ ಕಲಕಿ
ರತ್ನಗರ್ಭವನೂ ಛೇಧಿಸಿ
ಮುನ್ನುಗ್ಗಿದೆ ಮನದಾಳದಿ

ಅಂತರಂಗದಿ ಹೂತಿರುವ
ದುಗುಡ-ದುಮ್ಮಾನಗಳ
ಕೊಳೆಯ ಕಣ-ಕಣಗಳನ್ನು
ಮೇಲಕ್ಕೆ ಚಿಮ್ಮಿಸಿ
ಕದಡಿದೆ ತಿಳಿನೀರಿನಂತ ಮನವ

ಎನಿತು ಕಾಲದಿಂದ
ತಿಳಿನೀರ ತೆರೆಯ ಹಿಂದೆ
ಮನದಾಳದಿ ಅಮುಕಿ
ಹುದುಗಿಸಿರುವ ನೋವುಗಳನು
ಮತ್ತೆ ಮುಕ್ತಗೊಳಿಸಿದೆ

ಕಾಲನ ಕೈಚಳ ತಡೆವರಾರು ?
ಸೆಳೆವುದು ಕೊಳೆಯ ಕಣಗಳನು
ಭಾರವಾದುದೆಲ್ಲವೂ ತಳದೆಡೆಗೆ
ಸೆಳೆವುದು ನಿಸರ್ಗ ನಿಯಮ
ಮತ್ತೆ ತಿಳಿನೀರ ತೋರುತ್ತ ಮೆರೆವುದು ಅನವರತ

Monday, September 13, 2010

ವಿರಹಿ


ಅಗಲಿದ ನಲ್ಲೆಯ
ನೆನಪಿನ ದೋಣಿಯಲಿ
ಭವದ ಜಂಝಡಗಳ ಮೀರಿ
ದೂರ ದಿಗಂತದಾಚೆ ನಿರಂತರ
ಪಯಣಿಸುತ್ತಿರುವ ಯೋಗಿ

ಅಂತೆ-ಕಂತೆಗಳ ಯೋಚನೆಯಲ್ಲಿ
ಕಾಲನ ಕೈಯೊಳಗೂ ಸಿಗದೆ
ಅನುಕ್ಷಣವೂ ಕಾಲಾತೀತವಾಗಿ
ಸಂತೆಯಲ್ಲಿಯೂ ಏಕಾಂತವಾಗಿ
ಕನಸು ಕಾಣುವ ಹೋಗಿ


ನೂರು ಮನುಜರ ನಡುವೆ
ಹಲವು ಮನಸುಗಳ ಮಧ್ಯೆ
ಏಕಾಂಗಿಯಂತೆ
ನಲ್ಲೆಯೊಡನೆ ಭಾವನಾಲೋಕದಲಿ
ವಿಹರಿಸುವ ಭಾವಜೀವಿ

ನಿದ್ರಾಭಂಗ

ಮಧ್ಯ ರಾತ್ರಿಯಲಿ

ದಿಗ್ಗನೆ ಎದ್ದು ಕುಳಿತಾಗ
ನಿದ್ದೆ ಎಲ್ಲೋ ಕಳೆದುಹೋದಂತೆ

ಕಳೆದಿದ್ದು ಬರೀ ನಿದ್ದೆಯಲ್ಲ
ಕಳವಳದಿಂದ ನುಡಿಯಿತು
ಎನ್ನ ತಳಮಳಗೊಂಡ ಮನಸು

ದೂರದಲ್ಲಿ ಕೇಳಿಸುತ್ತಿರುವ
ಬೌಂವ್ ಎಂದು ಊಳಿಡುವ
ಬೀದಿನಾಯಿಯ ಗೋಳಿನ ರೋದನ

ತಾಳತಪ್ಪಿದ ಹೃದಯದ
ಆಳದಲಿ ಬೇರೂರಿರುವ ಭಯ ಬಡಿದೆಬ್ಬಿಸಿ
ನರನಾಡಿಗಳಲಿ ನಡುಕ ಹುಟ್ಟಿಸಿ


ದೇವರ ಮುಂದಿನ ನಂದಾದೀಪದ ಬೆಳಕಿನಲಿ
ಜಿರಳೆ, ಇಲಿ ಹುಳು-ಹುಪ್ಪಡಿಗಳ ನೆರಳು
ಕಣ್ಮುಚ್ಚಿದರೂ ಮನದಾಳಗಿ ಕಾಡಿ


ನೀರವ ರಾತ್ರಿಯ ಘೋರ ನಿಶಬ್ದದಲಿ
ನಿರಂತರವಾಗಿ ಕಾಲನ ಕುದುರೆಯ
ಕಟಕಟ ಸದ್ದಿನ ಗೋಡೆ ಗಡಿಯಾರ


ಈ ರಾತ್ರಿ ಕಳೆದು, ನಾಳೆಯಾದರೆ ಸಾಕು
ಕಳವಳಗೊಂಡ ಮನದಾಳದಿ
ಕ್ಷೀಣಗೊಂಡಂತೆ ಬೆಳಗುತ್ತಿರುವ ಆಶಾಕಿರಣ

Friday, September 3, 2010

ಎಲ್ಲಿರುವೆ

ಕಣ್ಣುಗಳು ಅರಸುತ್ತಿವೆ

ನಿನ್ನ ಇರುವಿಕೆಯನ್ನು
ನೂರಾರು ನಯನಗಳ ನಡುವೆ
ನಿನ್ನ ನೋಟವನ್ನು

ನಸುನಗುವ, ಹುಸಿಗೋಪದ
ತುಂಟ ನೋಟದ, ಮಂದಸ್ಮಿತವಾದ
ಕಾವ್ಯಲೋಕದ ಕಲ್ಪನೆಗಳ ಹೊತ್ತು
ಹಾಗೋ-ಹೀಗೋ ನಿನ್ನನ್ನು ಕಾಣಲು ಕಾತರಿಸುತ್ತ
ಅರಸುತ್ತಿವೆ ನನ್ನ ನಯನಗಳು

ನೀಲಿ ಬಾನಿನಲಿ ದಟ್ಟೈಸಿದ
ಕಾರ್ಮೋಡಗಳ ನಡುವೆ
ತೂರಿ ಬರುತಿಹ ಸೂರ್ಯರಶ್ಮಿಯ ತೆರದಿ
ಮಾನಿನಿಯರ ಮಧ್ಯೆ ಕಾಣುವ ಆಶೆಯಿಂದ
ಅರಸುತ್ತಿವೆ ನನ್ನ ನಯನಗಳು

ಇರುಳ ನೀಲಾಂಬರದಿ
ಅಗಣಿತ ತಾರೆಗಳ ತೋಟದಲಿ
ಬೆಳ್ಳಿಮೋಡಗಳ ನಡುವೆ
ರಾರಾಜಿಸುವ ಚಂದ್ರಬಿಂಬದಲಿ
ಅರಸುತ್ತಿವೆ ನನ್ನ ನಯನಗಳು


ಮಲ್ಲಿಗೆ, ಸಂಪಿಗೆ, ಗುಲಾಬಿಗಳ
ನಂದನದ ತೋಟದಲಿ ಬೀಸುವ ತಂಗಾಳಿ
ತಿಂಗಳಿನ ಬೆಳದಿಂಗಳಲಿ
ನಿನ್ನ ಇರುವಿಕೆಯನ್ನು ಅನವರತ
ಅರಸುತ್ತಿವೆ ನನ್ನ ನಯನಗಳು

ನಲ್ಲೆ

ಎನ್ನ ಹೃದಯವನು
ಕದ್ದೆ ನೀನು
ಮನಸ ಮನಸೂರೆಗೊಂಡೆ
ನನ್ನ ಭಾವನೆಗಳನೆಲ್ಲ
ಬರಸೆಳೆದುಕೊಂಡು
ಇಹ-ಪರವ ಮರೆಸಿದೆ
ಭಾವನೆಗಳಿಗೂ ಅಭಾವ
ಈಗ
ನನಗೆ ಅರಿವಾಗುತ್ತಿದೆ
ನಾನೇಕೆ ಬರೆಯಲಾರೆ
ಕವಿತೆ.

ವಯ್ಯಾರಿ

ತುಟಿಗಳ ಮೇಲೆ

ತುಂಟ ನಗುವನು ಬೀರಿ
ಕಳ್ಳ ನೋಟದಿ
ಹೃದಯವನು ಮೀಟಿ
ಮನಕೆ ಮುದನೀಡುತ್ತ
ಮಿಂಚಿ ಮರೆಯಾಗುವ
ವಯ್ಯಾರಿ ಹನಿಗವನ

ಏಳು-ಬೀಳುಗಳ
ಬಾಳ ಪಯಣದಲಿ ಸಂಗಾತಿಯಾಗಿ
ಜೀವನಕೆ ಆಸರೆಯಾಗಿ, ಉಸಿರಾಗಿ
ಸಮರಸದಿ ಬಾಳುವ
ಹಗಲಿರುಳು ಬಾಳಿನಲಿ
ನವರಸಗಳನೀಯುವ
ಹೃದಯದರಸಿ ಮಹಾಕಾವ್ಯ

ಎಲ್ಲಿ ಹೋದೆ ಗೆಳತಿ

ಕಣ್ಣಂಚಿನಿಂದ ಈಚೆಗೆ

ದೂರ ದಿಗಂತದಾಚೆಗೆ
ಇಲ್ಲಿ-ಅಲ್ಲಿ, ಎಲ್ಲೆಲ್ಲಿಯೂ
ನಿನ್ನ ಕಾಣದೆ
ನಿನ್ನಿರವನ್ನು ಅರಸುತ್ತ
ಕೊರಗಿವೆ ಎನ್ನ ಕಣ್ಣುಗಳು

ಎಲ್ಲಿ ಹೋದೆ ಗೆಳತಿ
ಎಂದು ಚಿಂತಿಸುತ
ತಲೆಯ ಮೇಲೊಂದು ಕೈಕೊಟ್ಟು
ಕಣ್ಮುಚ್ಚಿ ಯೋಚಿಸಲು
ಅರೆರೆ !!!
ನೀನು ಕಣ್ಣೆವೆಗಳ ಅಡಿಯಲ್ಲೇ
ಅಡಗಿ ಕುಳಿತಿರುವೆಯಲ್ಲ

ನಿಶಬ್ದ

ನಿಶಬ್ದ

ಪ್ರಕೃತಿಯ ಪುರಾತನ ಕವನ
ರಾಗ-ತಾಳಗಳ
ಪ್ರಾಸ-ಪಲ್ಲವಿಗಳ
ಭಾಷೆ-ಪ್ರಾಂತ್ಯಗಳ
ಹಂಗಿಲ್ಲದ ನಿತ್ಯನೂತನ ಕವನ

ದಟ್ಟ ಕಾನನದಿ
ತೆಂಗಿನಾ ತೂಗಿಗೆ
ಕಂಗಿನಾ ಬಾಗಿಗೆ
ತರು-ಲತೆಗಳ ವಯ್ಯಾರಕೆ
ಮಲ್ಲಿಗೆಯ ಬಳುಕಿಗೆ
ಸಂಪಿಗೆಯ ಥಳುಕಿಗೆ
ನಲಿವ ಗುಲಾಬಿಯ ತಾಳಕೆ
ಮೇಳೈಸುವ ಏಕಮೇವ ಕಾವ್ಯ


ಹರಿಯುವ ನದಿಯ
ಅಲೆಗಳ ಕಲರವಕೆ
ಭೋರ್ಗರೆವ ಜಲಪಾತದ
ರುದ್ರ ರಮಣೀಯತೆಗೆ
ಅಂತ್ಯವೇ ಇಲ್ಲದ
ಅನಂತ ಸಾಗರದ ಅಲೆಗಳಾಟಕೆ
ಸುತ್ತಲೂ ಸುಳಿಯುವ ತಂಗಾಳಿಯ
ಮೌನ ಸಂಗೀತಕೆ
ಮೇಳೈಸುವ ಏಕಮೇವ ಕಾವ್ಯ

ನಾಳೆಗಳು ಬರಲಿ

ನಾಳೆಗಳು ಬರಲಿ

ಬೆಂದು ಬಸವಳಿದ ತನುಮನಕೆ
ಚೇತನವ ತರಲಿಹಲವು ನೋವುಗಳ ಮರೆಸಿ


ನಲಿವಿನ ಆಸೆಗಳಿಗೆ ನೀರೆರೆಯಲಿ
ಮತ್ತೆ ನಾಳೆಗಳು ಬರಲಿ

ಕಣ್ಣಿನಾಳದಿ ಕರಗಿಹೋದ ಕನಸುಗಳಿಗೆ
ಬಣ್ಣವನು ತುಂಬಲಿ
ಬಾಳಿನ ದುಗುಡ-ದುಮ್ಮಾನಗಳು
ಕಳೆಯಲಿ
ಮತ್ತೆ ನಾಳೆಗಳು ಬರಲಿ

ಆಸೆಗಳು ಪೂರೈಸಲಿ
ಬಯಕೆಗಳು ಈಡೇರಲಿ
ಹೊಸ-ಹೊಸ ಬಯಕೆಗಳು
ಮತ್ತೆ ಮನದಾಳದಿ ಮೊಳಕೆಯೊಡೆಯಲಿ
ಮತ್ತೆ ನಾಳೆಗಳು ಬರಲಿ

ಚಿಂತೆಯ ಕಾರ್ಮೋಡಗಳು
ಕರಗಿ ನೀರಾಗಲಿ
ದುಗುಡದ ಅಂಧಕಾರವ ಕಳೆದು
ತೂರಿಬರಲಿ ಸೂರ್ಯರಶ್ಮಿಯ ಆಶಾಕಿರಣ
ಮತ್ತೆ ನಾಳೆಗಳು ಬರಲಿ


ನೂರು ಚಿಂತೆಗಳಿಂದ ಮುದುಡಿದ
ಮುಖದಲಿ ಮುಗುಳ್ನಗೆ ಮೂಡಲಿ
ಸಂತಸವು ಚಿಮ್ಮಲಿ ಬಾನೆತ್ತರಕೆ
ನವಜೀವನವು ಮೂಡಲಿ
ಮತ್ತೆ ನಾಳೆಗಳು ಬರಲಿ

Sunday, August 22, 2010

ಚಲನೆ

ಕೆರೆಯ ದಂಡೆ ಮೇಲೆ
ತೇಕುತ್ತ-ತೆವಳುತ್ತ
ಅಡಿಗಡಿಗೂ ಎಡವುತ್ತ
ನಡೆವುದನ್ನೇ ಮರೆತಂತೆ
ಹೆಜ್ಜೆಗಳ ಎಣಿಸುತ್ತ
ನಡೆಯುತ್ತಿರುವೆ ನಾನು
ಸಂಜೆಯ ನಡೆದಾಟಕೆ
ನಡೆದಾಡುವ ನಾಟಕಕೆ...
ಮೈಮನಗಳಿಗೆ ದಣಿವಾಗಿಸಿದ
ದೈನಂದಿನ ವ್ಯವಹಾರ
ಜಂಝಡಗಳನು,
ಮನಸಲ್ಲೇ ಮೆಲುಕು ಹಾಕುತ್ತ
ಹಿತ-ಸುಖಗಳನು ಮನದಲ್ಲಿ
ತೂರಿಸುತ
ನೋವು ಅಹಿತಗಳ
ತಲೆಯಿಂದಾಚೆಗೆ ತೂರಿ...
ಮತ್ತೆ ಮತ್ತೆ ಮನದಾಳದಿ
ಪುನರಾವಲೋಕನ ಗೈಯುತ್ತ
ಆತ್ಮವನು ಪುನಶ್ಚೇತನಗೊಳಿಸಲು
ಹೃನ್ಮನಗಳಿಗೆ ನವೋಲ್ಲಾಸ ತುಂಬಿ
ಸಂಸಾರ ಸಾಗರದಿ
ಮುಳುಗುತ್ತ, ತೇಲುತ್ತ ಮುನ್ನಡೆಯುವದೇ
ಜೀವನದ ನಡಿಗೆ
A Little Death In Dixie

Saturday, August 21, 2010

ತೃಷೆ....

ಐಷಾರಾಮಿ ಸೌಕರ್ಯಗಳ
ಸುಖವನ್ನು ಅನುಭವಿಸುತ್ತ
ಗಳಿಸಿದ್ದನ್ನೆಲ್ಲಾ ಉಳಿಸಿಕೊಳ್ಳಲು
ಹಗಲಿರುಳು ಶ್ರಮಿಸುತ್ತಾ....

ಹೊಟ್ಟೆಬಿರಿಯುವಷ್ಟು ತಿಂದು
ಬೀದಿಬದಿಯಲಿ ಬೀಸಾಕಿದ
ದೀನದಲಿತರ ತುತ್ತು ಕೂಳು...
ನೀರು-ಬೀರುಗಳು, ಪೆಪ್ಸಿ-ಕೋಲಾಗಳು
ಸೋಡಾ ಬೆರೆಸಿದ ಪರದೇಶಿ ಬ್ರ್ಯಾಂಡಿನ
ವಿಧ ವಿಧ ಪೇಯಗಳು
ಕಂಠ ಮಟ್ಟದವರೆಗೂ ಕುಡಿದು
ಕುಪ್ಪಳಿಸುವವರ ಕಾಲಸಂದುಗಳಲ್ಲಿ
ಪ್ರವಾಹದಂತೆ ಹರಿಯುತ್ತ
ಬಾಯಾರಿ, ಬಳಲಿ
ಹನಿ ನೀರಿಗೂ ಹಪಹಪಿಸುತ್ತ
ಆಜನ್ಮವೂ ತೀರದ ಬಡವರ ತೃಷೆ....

ಕೊಳೆಗೇರಿ ಪಕ್ಕದಲಿ
ಹರಿಯುವ ಚರಂಡಿ ನೀರಿನಲಿ
ಸಮ್ಮಿಳಿತಗೊಂಡು

ಹರಿಯುತಿರುವುದು ಅನವರತ
ಬಡವ-ಬಲ್ಲಿದರ ಬೇಧವನೂ ಮೀರಿ
ದೀನ-ದಲಿತರ, ಬಡವರ
ಕಣ್ಣೀರು, ಬೆವರುಗಳು ಸೇರಿ....

Wednesday, August 18, 2010

ಆಲದ ಮರ

ಆಕಾಶದೆತ್ತರಕೆ ಬೆಳೆದ
ಆಲದ ಮರ
ನಮ್ಮ ಸಂಸ್ಕೃತಿ, ಪರಂಪರೆ
ಸುತ್ತಲೂ ನೇತಾಡುತ್ತಿರುವ
ಬಿಳಲುಗಳು
ಪರಂಪರೆಯ ಹೆಸರಿನಲ್ಲಿ
ಪಸರಿಸಿರುವ
ಕಂದಾಚಾರ, ಮೂಢನಂಬಿಕೆಗಳು
ಮನವು ತೆರೆದುಕೊಳ್ಳುವುದು
ದಟ್ಟ ಹಸಿರೆಲೆಗಳ ಮಧ್ಯದಿಂದ
ಅಲ್ಲಲ್ಲಿ ತೂರಿಬರುತ್ತಿರುವ
ಸೂರ್ಯ ರಶ್ಮಿಯೆಡೆಗೆ
ಹೊಸತನದ ಜ್ಞಾನೋದಯಕೆ

ನಮ್ಮ ಪೂರ್ವಿಕರು ನೆಟ್ಟ
ಆಲದ ಮರ
ನಂಬಿಕೆಗಳ ನೀರುಣಿಸಿ

ತಾತ, ಮುತ್ತಾತಂದಿರು
ಬೆಳೆದಿದೆ ಇಂದು
ಭೂಮಿಯ ಉದ್ದಗಲಕೆ
ನಮಗದೇ ಆಲಯ, ಆಸರೆ
ನೂರು ನಿರ್ಭಂದಗಳು
ಮರದಾಚೆ ಹೋಗಲು
ಜ್ಞಾನದಾ ಬೆಳಕು
ಮೂಡುವುದೆಂತು ಮನದಿ
ನಮ್ಮ ತನು-ಮನ
ಹೃದಯಗಳು ತೆರೆದುಕೊಳ್ಳದೆ.....

Thursday, August 12, 2010

ಹೂ...


ಯಾರದೋ ಮುಡಿಯಿಂದ
ಇನ್ಯಾರದೋ ಕೈಯಿಂದ
ದಾರಿಯಲ್ಲಿ
ಜಾರಿ ಬಿದ್ದಿರುವ ಹೂವು
ಅವರಿವರ ಕಾಲ್ತುಳಿತಕ್ಕೆ
ಸಿಲುಕಿ
ನಶಿಸಿಹೋಗುತ್ತಿದೆ



ಬೀದಿ ಬದಿಯಲ್ಲಿ
ಕೊಳೆಗೇರಿ ಮಕ್ಕಳು
ಸಿರಿವಂತರ ಮನೆಯ
ತುತ್ತು ಕೂಳಿಗಾಗಿ, ಉಂಬಳಿಗಾಗಿ
ಹಂಬಲಿಸಿ ದುಡಿಯುತ್ತ
ಕಳೆದುಕೊಂಡಿರುವ
ಬಾಲ್ಯದ ಹಾಗೆ

ಎತ್ತಿ ಹಾಕುವುದಿಲ್ಲ ಯಾರೂ
ಅದನು ರಸ್ತೆ ಬದಿಗೆ
ಯಾರ ಮುಡಿಗೆ ಸೇರಿದೆಯೋ
ಪೂಜೆಗೆಂದು ಕೊಂಡೊಯ್ಯುವಾಗ
ಕೈಜಾರಿ ಬಿದ್ದರೆ, ಆವ ದೇವರ ಅಡಿಗೆ
ಸಲ್ಲಬೇಕಾತ್ತೋ
ಯಾರೂ ಅರಿಯರು

Friday, July 30, 2010

ಬೀಜ

ಎರಡು ಅಂಗುಲ ನೆಲದಾಳದಿಂದ

ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದು
ಭುವಿಯನ್ನೇ ಹಸಿರಾಗಿಸುವ ಹುಮ್ಮಸ್ಸಿನಿಂದಾ
ನೀರ ಹನಿಗಾಗಿ ಹಾತೊರೆಯುತ್ತಿದೆ ಬೀಜವೊಂದು


ಆಗಸದಲ್ಲಿ ಹಾರುತಿರುವ


ಮೋಡಗಳೆಲ್ಲ ಹನಿ ನೀರನ್ನು ಸುರಿಸದೆ
ಹಾಗೆಯೇ ಸರಿದುಹೋಗುವದನ್ನು ಕಂಡು
ಬಿರಿದು ಬಾಯ್ದೆರೆದ ನೆಲದಾಳದಿಂದ
ಬಸವಳಿದು ಮಮ್ಮಲ ಮರುಗಿತು ಮನದಾಳದಿಂದ

ಕಲ್ಪನಾ

ಇಲ್ಲ ಸಲ್ಲದ ನೆವಗಳ ಹುಡುಕಿ,

ಮತ್ತೆ ಮತ್ತೆ
ಅವಳ ಸುತ್ತ ಸುಳಿಯುವುದಕ್ಕೆ
ಮನ ಹಾತೊರೆಯುತ್ತಿದೆ.

ಅವಳ ತುಂಟ ನಗೆಯೊಂದು
ಕವನದಾ ಸಾಲು
ಮನದಾಳದಿ ಇಳಿಯುವ
ಆ ಕುಡಿ ನೋಟವು
ಮತ್ತೊಂದು ಸಾಲು

ಪ್ರಾಸವೂ ಇಲ್ಲ
ಪಲ್ಲವಿಯೂ ಇಲ್ಲ
ಬರೆಯಲು ಯಾವ
ಪದಗಳೂ ಇಲ್ಲ
ಈ ಕವನ ಮುಗಿಯುವುದೂ ಇಲ್ಲ

ತಲ್ಲಣಿಸದಿರು .......


ಮುಂದುವೆರಯುವ ಮುನ್ನ :ಕವನಗಳನ್ನೇ ಬರೆಯಲು ಯಾಕೋ ನನ್ನ ಮನದಾಳದಲ್ಲಿ ಭಾವನೆಗಳು ಮೊಳಕೆಯೊಡೆಯಲಿಲ್ಲ. ಆದರೆ ಬಹಳಷ್ಟು ದಿನಗಳವರೆಗೆ  ಸುಮ್ಮನೇ ಕಾಲಹರಣ ಮಾಡುವ ಬದಲು ಇಲ್ಲಿ ಏನಾದರೂ ಬರೆಯಲೇ ಬೇಕು ಎನ್ನುವ ಹಂಬಲದೊಂದಿಗೆ ನಿಮ್ಮ ಮುಂದೆ ಒಂದು ಸಣ್ಣ ಕಥೆಯನ್ನು (ಕಾಲ್ಪನಿಕ) ಹೇಳುತ್ತಿದ್ದೇನೆ. 

ತಲ್ಲಣಿಸದಿರು .....

          ಧಡ್ ಧಡ್ ಧಡ್ ಬಾಗಿಲು ಬಡಿದ ಸಪ್ಪಳದಿಂದ ದಿಗ್ಗನೆ ಎದ್ದೆ, ಏನೋ ಒಂಥರಾ ಆಯೋಮಯ ಪರಿಸ್ಥಿತಿ, ಎಲ್ಲಿದ್ದೀನಿ ಅನ್ನೋದು ತಿಳಕೊಳ್ಳಾಕ ಅರೆಘಳಿಗೆ ಸಮಯ ಹಿಡೀತು. ನಿಂತ ಜಾಗಾ ಹೊಯ್ದಾಡೋದು ಅರಿವಿಗೆ ಬರೂಹೊತ್ತಿಗೆ ನಾನು ಟ್ರೇನ್ ಒಳಗ, ಅದೂ ಟಾಯಿಲೆಟ್ ಒಳಗ ಇರೂದು ತಿಳೀತು, ಆದ್ರ ಇಂಥ ಖಬರಗೇಡಿ ಪರಿಸ್ಥಿತಿ ಬಂದಿದ್ಯಾಕ !!! ಮತ್ತು ಮನಸು ವಿಚಾರದೊಳಗ ಮುಳುಗಿತು. ಬೆಳಿಗ್ಗೆದ್ದು ರಾಯಬಾಗಕ್ಕ ಆಫೀಸ್ ಕೆಲಸಕ್ಕ ಹೋಗಿ, ನನ್ನ ಕೆಲಸಾ ಮುಗಿಸಿಕೊಂಡ ಮತ್ತ ಮರಳಿ ರಾಣಿ ಚೆನ್ನಮ್ಮ ಟ್ರೇನ್ ಹಿಡದ ವಾಪಸ ಬರಾಕಹತ್ತಿದ್ದೆ. ಟ್ರೇನ್ ಇನ್ನೇನು ಸ್ಟೇಶನ್ ಬಿಡಬೇಕು ಅನ್ನೂದರೊಳಗ ಒಬ್ಬ ಹೆಂಗಸು ಮೂರು ತಿಂಗಳ ಮುದ್ದಾದ ಕೂಸಿನ್ನ ಎತ್ಕೊಂಡು ಟ್ರೇನ್ ಹತ್ತೂದಕ್ಕ ಓಡೋಡಿ ಬರ್ತಿದ್ದಳು, "ನಿಮಗ ಏನು ಹೇಳಿದ್ರೂ ತಿಳಿಯೂದಿಲ್ಲ, ಟೈಮ್ ಸೆನ್ಸ್ ಇಲ್ಲ-ಇಲ್ಲಾ ಮುಂಜಾನಿಂದ ಹೇಳಾಕತ್ಹೇನಿ, ಎಲ್ಲಾ ಕಟ್ಕೊಂಡು, ಲಗೂನ ರೆಡಿ ಆಗು ಅಂತ ಬಡಕೊಂಡ್ರೂ ಇದ ಕತಿ ನಿಂದು..." ಬಹುಶ ಆ ಹೆಂಗಸಿನ ಗಂಡ ಇರಬಹುದು ಗೊಣಗುತ್ತಾ ತನ್ನ ಕೈಯೊಳಗೂ ಒಂದು ಕೈಚೀಲ ಹಿಡಕೊಂಡು ಟ್ರೇನ್ ಹತ್ತಸಾಕ ಓಡೋಡಿ ಬರತಿದ್ದಾ. ಅಂತೂ ಇಂತೂ ಅವರು ನಮ್ಮ ಬೋಗಿ ಹತ್ತರ ಬರೂದನ್ನ ಅಂದಾಜಿಸಿ, ಬಾಗಿಲ ಹತ್ತರ ಹೋಗಿ, ಆ ಹೆಂಗಸಿನ ಕೈಯೊಳಗಿಂದ ಚೀಲ ನಾನು ತಗೊಂಡೆ. ತುಂಬು ಗರ್ಭಿಣಿ ನಡೆಯೂ ತರಹ ಸಾವಕಾಶ ಹೊಂಟಿದ್ದ ಟ್ರೇನು ತನ್ನ ವೇಗ ಪಡೆಯುವದರೊಳಗ, ಆ ಹೆಂಗಸು ತನ್ನ ಮಗುವಿನೊಂದಿಗೆ ಉಳಿದ ಎಲ್ಲ ಲಗೇಜುಗಳನ್ನು ತಗೊಂಡು ಟ್ರೇನ್ ಹತ್ತಿದಳು. "ಊರಿಗೆ ಹೋಗಿ ಮುಟ್ಟಿದ ತಕ್ಷಣ ಫೋನ್ ಮಾಡು !!! ಕೂಸಿನ್ನ ಹುಷಾರಾಗಿ ನೋಡ್ಕೋ" ಅಂತ ಗಂಡಸಿನ ಧ್ವನಿ ಕೇಳಿದಾದ, ಅವಾ ಈಕಿನ್ನ ಕಳಸಾಕ ಮಾತ್ರ ಬಂದಿದ್ದಾ ಅಂತ ನಾನು ಅನ್ಕೊಂಡೆ.

* * *


       ಅಲ್ಲಿ-ಇಲ್ಲಿ ತನಗ ಅವಳು ಜಾಗಾ ಹುಡುಕೂದ ನೋಡಿ, ನಾನು ಕುಂತಿದ್ದ, ಸೀಟಿನೊಳಗ ಇದ್ದಂತ ಮಂದಿ, ಇಲ್ಲೇ ಕೂತ್ಕೋ ತಂಗಿ ಅಂತ ಸೀಟು ಅಡ್ಜಷ್ಟ್ ಮಾಡಿ ಕೊಟ್ಟರು. ಮುದ್ದಾದ ಮಗುವಿನ ತುಂಟಾಟ, ಸುಂದರ ತರುಣಿಯೆಡೆಗೆ ಒಂದು ಕುತೂಹಲದ ನೋಟ ಇತ್ಯಾದಿಗಳಲ್ಲಿ ಪ್ರಯಾಣ ಸಾಗಿತು. ಈ ಮಧ್ಯದಲ್ಲಿ ಮಗುವಿಗೆ ಏನೋ ರೈಲಿನ ಗೌಜು-ಗೊಂದಲಗಳು ಸಹನೆಯಾಗಲಿಲ್ಲ ಅನಿಸುತ್ತದೆ. ಮಗು ಸ್ವಲ್ಪ ಕಿರಿಕಿರಿ ಮಾಡಲು ಸುರುಮಾಡಿತು. ಪಾಪ ಪುಟ್ಟ ಕೂಸು ಏನನ್ನೂ ಹೇಳಲು ಬಾರದು. ಅಷ್ಟರಲ್ಲಿ ಘಟಪ್ರಭಾ ರೈಲು ನಿಲ್ದಾಣ ಬಂತು. ಸ್ವಲ್ಪ ಈ ಮಗೂನ್ನ ನೋಡ್ಕೊಳ್ತೀರಾ ನಾನು ಇದಕ್ಕೆ ಹಾಲು, ಬಿಸ್ಕತ್ತು ಏನಾದರೂ ತರುತ್ತೇನೆ ಎಂದು ಆ ಮಹಿಳೆ ಹೇಳಿದಾಗ ನನಗೆ ಇಲ್ಲವೆನ್ನಲು ಆಗಲಿಲ್ಲ. ಆಯಿತು ನೀವು ತಗೊಂಡ್ಬನ್ನಿ ಎಂದು ಮಗುವನ್ನು ಎತ್ಕೊಂಡೆ. ಮುದ್ದಾನ ಮಗುವಿನ ಆ ನಗುವಿನಲ್ಲಿ ನನ್ನನ್ನೇ ಮರೆತೆ. ರೈಲಿನ ವಿಶಲ್ ಕೇಳುವವರೆಗೆ ನನಗೆ ಈ ಲೋಕದ ಅರಿವೇ ಇರಲಿಲ್ಲ. ರೈಲು ಸಾವಕಾಶವಾಗಿ ಚಲಿಸಲು ಆರಂಭಿಸಿದರೂ ಆ ಹೆಂಗಸು ಬಂದಿರಲಿಲ್ಲ. ಬಹುಶ ರೈಲು ಹತ್ತಿರಬಹುದು ಬಹಿರ್ದೆಶೆಗೆ ಹೋಗಿರಬಹುದು ಎಂದು ಭಾವಿಸಿ ಮತ್ತೆ ಮಗುವಿನ ತುಂಟ ನಗುವಿನಲ್ಲಿ ಲೀನನಾದೆ. ಅಷ್ಟರಲ್ಲಿ "ಹೋ ಏನಾದ್ರೂ ಮಾಡಿ, ನನ್ನ ಮಗು ಅಯ್ಯೋ ದೇವ್ರೆ ....." ಧ್ವನಿ ಕೇಳಿಸಿದಾಗ ನನಗೆ ವಾಸ್ತವಿಕ ಪ್ರಪಂಚದ ಅರಿವಿಗೆ ಬಂದಿದ್ದು. ರೈಲಿನೊಂದಿಗೆ ಅನತಿ ದೂರದಲ್ಲಿ ಆ ಹೆಂಗಸು ಓಡಿ ಬರುತ್ತಿದ್ದರೆ, ಮಗುವನ್ನು ಒಂದು ಕೈಯಲ್ಲಿ ಎತ್ತಿಕೊಂಡು ಬಾಗಿಲಿನೆಡೆಗೆ ಹೋಗಲು ನೋಡಿದೆ. ಆದರೆ ರೈಲಿನ ವೇಗ ಹೆಚ್ಚಾಗಿ ಆ ಮಹಿಳೆಯನ್ನು ಮೇಲೆ ಹತ್ತಿಸಿಕೊಳ್ಳುವುದೇ ಅಥವಾ ಈ ಮಗುವನ್ನು ಅವಳಿಗೆ ಕೊಡುವುದೇ ಎಂಬ ದ್ವಂದ್ವದಲ್ಲಿ ಇರುವಾಗಲೇ ರೈಲು ಸ್ಟೇಶನ್ ದಾಟಿ ಹೋಗಿತ್ತು. ಅದುವರೆಗೆ ನನ್ನ ಜೊತೆಗೆ ರಾಯಬಾಗದಿಂದ ಬಂದಿದ್ದ ಇತರ ಪ್ರಯಾಣಿಕರೂ ಅಲ್ಲಿಯೇ ಇಳಿದುಬಿಟ್ಟಿದ್ದರು. ಈಗ ಹೊಸ ಪ್ರಯಾಣಿಕರೊಂದಿಗೆ ನಾನು ಮುದ್ದಾದ ಕೂಸಿನೊಡನೆ ಏಕಾಂಗಿ. ರಾಯಬಾಗದಲ್ಲಿ ಓಡುತ್ತಿರುವ ರೈಲನ್ನು ಹತ್ತುವಾಗ ಆ ಹೆಂಗಸು ಮತ್ತು ಕೂಸನ್ನು ಮೇಲೆ ಹತ್ತಿಸುವಲ್ಲಿ ನೆರವಾಗಿದ್ದೆ. ಆದರೆ ಈಗ ಅದೇ ಹೆಂಗಸು ಪುನಃ ರೈಲು ಹತ್ತಲಾಗದೇ ಇದ್ದುದನ್ನು ಆದರೆ ಅವಳದೇ ಮುದ್ದಾದ ಮಗುವನ್ನು ಸಂಬಂಧಿಕರಿಲ್ಲದೇ ನನ್ನ ತೊಡೆಯ ಮೇಲೆ ಆಡುತ್ತಿರುವದನ್ನು ನನ್ನ ಮನಸ್ಸು ಇನ್ನೂ ಯೋಚಿಸುತ್ತಿತ್ತು.

* * *




       "ನಮಸ್ಕಾರ್ರೀ ಸರ್" ಪರಿಚಿತ ಧ್ವನಿ ಕೇಳಿದಾಗ ಪುನಃ ನಾನು ವಾಸ್ತವಕ್ಕೆ ಮರಳಿದೆ. "ಏನ್ರೀ ಸರ ವೈನಿ ಇಲ್ಲದ ಕೂಸಿನ್ನ ಕರಕೊಂಡ ಎಲ್ಲಿಗೆ ಹೋಗಿದ್ರಿ ?" ಅಂದಾಗ ನಾನು ಏನೋ ಹೇಳುವಷ್ಟರಲ್ಲಿ "ಅಲ್ರೀ ಸರ ವೈನಿ ಧಾರವಾಡದವರು, ಈ ಕಡೇಂದ ಕೂಸಿನ್ನ ಕರಕೊಂಡ ಎಲ್ಲಿಗೆ ಹೋಗಿದ್ರಿ ?" ಎರಡನೇ ಪ್ರಶ್ನೆ ತೂರಿಬಂತು. "ಇಲ್ಲ ಇದು ನನ್ನ ಮಗಾ ಅಲ್ಲ" ಎಂದು ಹೇಳುವಷ್ಟರಲ್ಲಿ "ಹೌದೇನ್ರಿ ಸರ, ಅಂದ್ರ ಇದು ನಿಮ್ಮ ಮಗಳಿರಬೇಕು ..." ಎಂದು ಅವರು ಕೇಳಿದರು. ಎಲಾ ಇವನ ಈ ಕೂಸು ಗಂಡೋ-ಹೆಣ್ನೋ ನೋಡಲೇ ಇಲ್ವಲ್ಲ ಅನಿಸಿತು. ಕೂಸು ಗಂಡಾದರೇನು ಹೆಣ್ಣಾದರೇನು ಭಾಳ ಮುದ್ದಾಗೆದ, ಅಲ್ಲದ ಅದು ಮಂದೀದು ಅದನ್ನೇನು ನೋಡುದಿರ್ತತಿ ಅಂತ ಮನಸಿನ್ಯಾಗ ನನ್ನಷ್ಟಕ್ಕ ನಾನ ಮಾತಾಡ್ತಿದ್ದೆ. "ಅಲ್ಲಾ ಸಾಹೇಬರದು ಮದುವಿ ಆಗಿ ಇನ್ನೂ ಒಂದು ವರ್ಷನೂ ಆಗಿಲ್ಲ .." ರಾಗವಾಗಿ ಇನ್ನೊಂದು ಧ್ವನಿ ಕೇಳಿಸಿತು. ಕೂಸು ಸಣ್ಣದಾಗಿ ನಕ್ಕಿತು ಆದರೆ ನನಗ ಒಂಥರಾ ನಾಚಿಕೆ ಬೆರೆತ ಅವಮಾನ ಅನಿಸಿ "ಇಲ್ರೀ ಇದು ನನ್ನ ಕೂಸು ಅಲ್ಲ, ಒಬ್ಬಾಕಿ ಹೆಂಗಸು ಎತ್ಕೊಳ್ಳಾಕ ಕೊಟ್ಟು ಹಾಲು -ಬಿಸ್ಕಿಟು ತರತೇನಿ ಅಂತ ಕೊಟ್ಟು ..." ಅಂತ ಇನ್ನೂ ನನ್ನ ಮಾತು ಬಾಯೊಳಗ ಇರುವಾಗಲೇ !!! "ಏನ್ರೀ ಸರ್ ವೈನಿ ಜೊತೆ ಏನರ ಜಗಳಾಡಿರೇನು ? ಹಿಂಗ್ಯಾಕ ಮಾತಾಡ್ತೀರಿ ನೀವು.... ಸಂಸಾರ ಅಂದಮ್ಯಾಲ ಸಣ್ಣ-ಪುಟ್ಟ ಜಗಳ-ಜಂಜಾಟ ಇರುವ... ಅಷ್ಟಕ್ಕ ಸ್ವಂತ ಕೂಸಿನ್ನ ನಂದು ಅಲ್ಲ ಅನಬಾರದು ನೋಡ್ರಿ" ಎಂದಾಗ ನನ್ನ ಜಂಘಾಬಲವೇ ಉಡುಗಿತು, ಕೈ-ಕಾಲು ಎಲ್ಲಾ ತಣ್ಣಗ ಅನಸಾಕ ಹತ್ತಿದವು. ಮುದ್ದಾದ ಕೂಸು ನನ್ನ ಮಾನಸಿಕ/ನೈತಿಕ ನೆಮ್ಮದಿಗೆ ಮೂಲ ತಂತಲ್ಲಾ ಅಂತ ಯೋಚಿಸುತ್ತಿರುವಾಗಲೇ "ಆತ್ರೀ ಸರ !!! ನಿಮ್ಮ ಕೂಸು ಅಲ್ಲಂದ್ರ ನೀವು ಹೇಳ್ತಿರೂ ಆ ಹೆಂಗಸ ಎಲ್ಲಿ ಅದ ? ಅದನ್ನರ ತೋರಿಸ್ರಿ ... ನಾವೇನರ ಪಾರ್ಟಿ-ಗೀರ್ಟಿ ಕೇಳ್ತಿವಂತ ಹಿಂಗ ಹೇಳಬ್ಯಾಡ್ರಿ" ಪುನಃ ಮಾತುಗಳು ನನ್ನ ಮನಸ್ಸಿಗೆ ಚುಚ್ಚಾಕ ಸುರು ಮಾಡಿದವು. ಉತ್ತರ ಕೊಟ್ರ ಮತ್ತ ಅಡ್ಡ ಪ್ರಶ್ನೆ ಅದಕ್ಕ ಇವರ ಉಸಾಬರಿನ ಬ್ಯಾಡ ಅಂತ ಸುಮ್ಮನಾದೆ. ಆದ್ರೂ ಕೂಡ ಈ ಸಣ್ಣ ಘಟನೆ ನನ್ನ ವೈಯಕ್ತಿಕ ಸಂಸಾರ ಜೀವನಕ್ಕ ಮೂಲ ಆಯಿತಲ್ಲ ಅಂತ ವಿಚಾರಸಿಕೊಂತ ಸುಮ್ಮನ ಕೂತ್ಕೊಂಡೆ.


* * *



         "ಏ ಯಪ್ಪಾ !!! ಬಾಗಲ ತಗಿತಿಯಿಲ್ಲೋ ? ಅಲ್ಲೇನು ನಿದ್ದಿ ಮಾಡಾಕ ಹತ್ತೀಯೇನು ? ಇಲ್ಲ ಏನರ ಲಫಡಾ-ಗಿಫಡಾ ಮಾಡಿ ಈ ಕೂಸಿನ್ನ ನಮ್ಮ ಕೈಯಾಗ ಕೊಟ್ಟು ದಾಟಿಗೋಬೇಕಂತ ಮಾಡಿಯೇನು ?" ಹೊರಗಿಂದ ಧ್ವನಿ ಅಪ್ಪಳಿಸಿದಾಗ ಮತ್ತ ಈ ತಾಪತ್ರಯದ ಪ್ರಪಂಚಕ್ಕ ಮರಳಿ ಟಾಯಿಲೆಟ್ ಬಾಗಲು ತೆಗೆದು "ಸಾರಿ ರೀ, ಏನೋ ಒಂಥರಾ ಹೊಟ್ಯಾಗ ತಳಮಳಾಕ ಹತ್ತಿತ್ತು ಅದಕ್ಕ ಸ್ವಲ್ಪ ಲೇಟಾತು" ಅಂತ ಬಾಗಲಾ ತೆಗೆದೆ. "ಈ ಬ್ರಿಟೀಷರು ನಮಗೆಲ್ಲಾ ಸ್ವಾತಂತ್ರ್ಯ ಕೊಟ್ಟು ಹೋಗೂಮುಂದ ಸಾರಿ !!! ಥ್ಯಾಂಕ್ಸ ಎರಡು ಪೀಡಾಗಳನ ಈ ದೇಶದೊಳಗ ಬಿಟ್ಟು ಹೋಗ್ಯಾರ ನೋಡ್ರಿ, ಸಾರಿ ಅಂದ್ರ ಮುಗೀತು ಮುಂದ ಏನೂ ಮಾತಾಡುಹಂಗಿಲ್ಲ" ಅಂತ ಇನ್ನೊಬ್ಬವನ ಜೊತೆಗೆ ಗೊಣಗಿದ "ಹಂಗೇನಿಲ್ರೀ ಈಗಿನ ಜಮಾನಾ ಹಿಂಗ ಅದ" ನಾವು ಏನು ಮಾತಾಡಿದ್ರೂ ಅಷ್ಟ ಅದ" ಅಂತ ಮಾತಾಡಿಕೊಳ್ಳತ ಅವರು ಕೂಸು ನನ್ನ ಕೈಯೊಳಗ ಕೊಟ್ಟು ಇಳದು ಹೋದರು. ಸಿಂಕಿನೊಳಗ ಕೈ ತೊಳೊಕೊಂಡು ಮತ್ತ ಕೂಸಿನ್ನ ತಗೊಂಡು ನನ್ನ ಜಾಗಾದಾಗ ಕೂತ್ಕೊಂಡೆ.



* * *

 
      ಪರಿಚಯದವರು ನನಗ ಏನೆಲ್ಲಾ ಮಾತಾಡಿದ್ರು ಈ ಕೂಸಿನ ದೆಸೆಯಿಂದ. ಇವರೆಲ್ಲಾ ನನಗ ಪರಿಚಯ ಅಂತ ಅನ್ನೂಕಿಂತ ನಮ್ಮ ಮಾವನ ಜೊತೆ ಕೆಲಸ ಮಾಡಿದವರು. ನನ್ನ ಮುಂದ ನನ್ನ ನೈತಿಕತೆ ಬಗ್ಗೆ ಈ ಥರಾ ಮಾತಾಡೋವವರು ಇನ್ನ ನಮ್ಮ ಮಾವನ ಮುಂದ ಏನೇನು ಕಥಿ ಹೇಳತಾರೋ ಅಂತ ಮನಸಿನೊಳಗ ಕಳವಳ ತುಂಬಿಕೊಂತು. ಮ್ಯಾಟ್ರಿಕ್ ಮುಗಿಸಿ ಅಲ್ಲಿ-ಇಲ್ಲಿ ಅಡ್ಯಾಡಿಕೊಂತ ಇರಬೇಕಾದರ, ದೂರದ ಸಂಬಂಧ ಅಂತ ನಮ್ಮ ಮಾವ ನನಗ ಏನೋ ಮಾಡಿ ಒಂದ ಕೆಲಸ ಕೊಡಿಸಿ, ಮತ್ಯಾಕ ಬಾಡಿಗಿ ಮನಿ ಮಾಡತಿ ಅಂತ ಹೇಳಿ ತನ್ನ ಮನಿಯೊಳಗ ಮನಿ ಅಳಿಯಾನ ಥರಾ ಇಟ್ಕೊಂಡಿದ್ದಾ. ಮದುವೆ ಆಗಿ ಇನ್ನೂ ಒಂದ ವರ್ಷ ಕಳೆದಿಲ್ಲಾ. ಹಿಟ್ಲರ್ ಥರಾ ಇರೋ ನಮ್ಮ ಮಾವನ ಮನಿಯೊಳ ನಾನು ಮಾತಾಡಿದ್ದಕ್ಕಿಂತ ಹೊರಗ ನನ್ನ ಕೆಲಸ-ಕಾರ್ಯದ ಮಾತ ಮಾತಾಡಿದ್ದ ಹೆಚ್ಚ. ಅಂಥಾದರೊಳಗ ಈ ಕೂಸು ನನಗ ಗಂಟ ಬಿದ್ದೈತಿ.. ಇದನ್ನ ಕರಕೊಂಡ ಇನ್ನ ನಾ ಮನಿಗೆ (ಮಾವನ ಮನಿಗೆ) ಹೋದ್ರ ನನ್ನ ಪರಿಸ್ಥಿತಿ ಏನಕ್ಕೈತಿ ಅನ್ನೂದು ವಿಚಾರ ಮಾಡಿದರ ಮೈಯೆಲ್ಲಾ ಬೆವರಾಕ ಸುರು ಆತು. ಆ ಹೆಂಗಸಿನ ಜೊತೆ ಇದ್ದಾಗ ಕಿರಿ-ಕಿರಿ ಮಾಡಿದ ಕೂಸು ಯಾಕೋ ಏನೋ ಇಷ್ಟೊತ್ತಾದರೂ ನನ್ನ ತೊಡೆಮ್ಯಾಲೆ ಆಟ ಆಡಿಕೊಂತ ತುಂಟ ನಗು ಬೀರಿಕೊಂತ ಸುಮ್ಮನ ಇತ್ತು. ಈ ಕೂಸು ಅಕೀದ ಹೌದೋ ಅಲ್ಲೋ ಯಾರಿಗೆ ಗೊತ್ತು. ಅಥವಾ ಅಕೀನೂ ಏನೋ ಲಫಡಾ ಮಾಡಿ ಬೇಕಂತ ನನಗ ತಗಲಿಸಿ ಹೋಗಿರಬೇಕು ಹಿಂಗ ಏನೇನೋ ಕೆಟ್ಟ ವಿಚಾರಗಳು ಮನಸಿನೊಳಗ ಕುಣ್ಯಾಕ ಹತ್ತಿದವು. ಮೆಲ್ಲಗೆ ಆಕಡೆ-ಈಕಡೆ ಸರಿದಾಡಿಕೊಂತ ತನ್ನ ಆಟ ಮುಂದುವರೆಸಿದ್ದ ಕೂಸು ನೋಡಿದ್ರ ನನ್ನ ತೊಡಿಮ್ಯಾಲೆ ಹಾವು ಸರಿದಾಡಿದಂಗ ಭಯ ಅನಿಸಿ, ಆ ಕೂಸಿನ ಕಡೆ ನೋಡುದ ಬಿಟ್ಟೆ. ಸ್ವಲ್ಪ ಹೊತ್ತಿನ ಮೊದಲ ನನ್ನ ಮನಿಸಿನ್ಯಾಗ ಅವ್ಯಕ್ತ ಆನಂದ ಪಸರಿಸಿದ್ದ ಕೂಸು ಈಗ ಅನವರತ ಭಯಕ್ಕ ಮೂಲ ಆಗಿತ್ತು.
* * *


       "ಚಾಯ್-ಚಾಯ್, ಗರಮಾ-ಗರಂ ಇಡ್ಲಿ-ವಡೆ, ಬೆಳಗಾವ ಕುಂದಾ" ಅಂತ ರೈಲಿನೊಳಗ ಗದ್ದಲ ಕೇಳಿಸಿಕೊಂಡು ಮೈಮ್ಯಾಲ ಖಬರು ಇಲ್ಲದ ಕೂತಂತವ ಬೆಳಗಾವಿ ಬಂತು ಅಂತ ಎದ್ದೆ. ಕಿಲ-ಕಿಲನೆ ಕೂಸು ನಕ್ಕಿದ್ದ ಒಂದು ಪ್ರಶ್ನ್ಯಾರ್ಥಕ ಚಿನ್ಹೆ ನನ್ನ ಮುಖದ ಮ್ಯಾಲೆ ಮೂಡಿಸಿತು. ಇದನ್ನ ಏನು ಮಾಡಬೇಕಪಾ ಇನ್ನ. ಅಂತ ಎದ್ದು, ಇಲ್ಲೇ ಬಿಟ್ಟುಹೋದರ ಯಾರ ಕೂಸೈತೋ ಏನೋ ? ನನಗ್ಯಾಕ ಇಲ್ಲದ ತಾಪತ್ರಯ ಅಂತ ಎರಡು ಹೆಜ್ಜೆ ಮುಂದ ಇಟ್ಟಾಗ... "ರೀ ಸಾಹೇಬರ ಕೂಸು ತೊಗೋರೀ ಇಲ್ಲಂದ್ರ ಕೆಳ ಬಿದ್ದಗಿದ್ದೀತು" ಮತ್ತೊಬ್ಬರು ಎಚ್ಚರಿಸಿದಾಗ, ಇದು ನನ್ನ ಜನ್ಮಜನ್ಮಾಂತರದ ಜೊತೆಗಾರ(ತಿ) ಇರಬೇಕು ಏನಾದರಾಗಲಿ ಅಂತ ಎತ್ಕೊಂಡು ಕೆಳಗ ಇಳಿದೆ. "ಓ ಅಲ್ಲೈತಿ ನೋಡು ... ಆ ಸಾಹೇಬ್ರು ಎತ್ಕೊಂಡಾರ" ಅಂತ ಒಬ್ಬರು ನನ್ನ ಕಡೆ ಓಡೋಡಿ ಬಂದ್ರು. ಎಲಾ ಇವರ ಇಷ್ಟೊತ್ತನ ಇದರಿಂದ ನನ್ನ ಮಾನಸಿಕ-ನೈತಿಕ ನೆಮ್ಮದಿ ಹಾಳಾತು. ಈಗ ಕೂಸಿನ ಕದ್ದಾವ ಇವ ಅಂತ ಮತ್ತೊಂದು ಸಮಸ್ಯೆ ಬಂತಲ್ಲಪಾ ಅಂತ ಅಳುಕಿಕೊಂತ ಕೈ-ಕಾಲು ನಡುತಿದ್ರೂ ಅವರಕಡೆ ಮೆಲ್ಲಗೆ ಸಾಗಿದೆ. "ಥ್ಯಾಂಕ್ಸ ರೀ ಸರ.. ಅಕಿಗೆ ರೈಲು ಹತ್ತಾಕ ಆಗಲಿಲ್ಲಂತ ನನಗ ಫೋನು ಮಾಡಿದಳು", "ಕೂಸಿಗೆ ಏನಾತೋ ಏನೋ... ಎತ್ಕೊಂಡವರು ಅಲ್ಲೇ ಏನರ ಬಿಟ್ಟು ಇಳದರ.... ಕೆಳಗ ಏನರ ಬಿದ್ದು ...." ಅಂತ ಹಂಗ ಅವರು ತಡವರಿಸಿಕೊಂತ ನನ್ನ ಕೈಯೊಳಗಿನ ಕೂಸು ಎತ್ಕೊಂಡರು. ಹೂವಿನಷ್ಟು ಹಗುರವಾಗಿದ್ದರೂ ನನ್ನ ಜೀವನಕ್ಕಿಂತ ಭಾರ ಅನಿಸಿದ ಆ ಕೂಸು ಅವರ ಕೈಯೊಳಗ ಹೋದದ್ದ ತಡಾ... ನನಗ ಗಾಳ್ಯಾಗ ತೇಲುವಂತಹ ಸಂತೋಷ. ಅವರು ಕೂಸು ಎತ್ಕೊಂಡು ದೂರ ಸಾಗಿದಂಗ ಕೂಸು ಮತ್ತ ಕಿಲ-ಕಿಲನೆ ನಕ್ಕಿತು.

***


ಈ ಸಲಾ ನನ್ನ ಮನಸು ಸಂತೋಷದಿಂದ ಅರಳಿತು. ಮತ್ತ ಮನಸಿನೊಳಗ "ಈ ಬ್ರಿಟೀಷರು ನಮಗೆಲ್ಲಾ ಸ್ವಾತಂತ್ರ್ಯ ಕೊಟ್ಟು ಹೋಗೂಮುಂದ ಸಾರಿ !!! ಥ್ಯಾಂಕ್ಸ ಎರಡು ಪೀಡಾಗಳನ ಈ ದೇಶದೊಳಗ ಬಿಟ್ಟು ಹೋಗ್ಯಾರ ನೋಡ್ರಿ, ಥ್ಯಾಂಕ್ಸ ಅಂದ್ರ ಮುಗೀತು ಮುಂದ ಏನೂ ಮಾತಾಡುಹಂಗಿಲ್ಲ" ಗೊಣಗಾಟ ಮುಂದುವರೆದಿತ್ತು.

Sunday, April 4, 2010

ಶಕುಂತಲೆ

ಅಂದು ಜರುಗಿದ ದುಷ್ಯಂತ-ಶಕುಂತಲೆಯರ ಪ್ರಣಯ ಭರತವರ್ಷದಲ್ಲಿ ದಾಖಲಿಸಲ್ಪಟ್ಟಿರುವ ಶ್ರೇಷ್ಠ ಪ್ರೇಮಕಾವ್ಯ. ಕಾಳಿದಾಸನ "ಅಭಿಜ್ಞಾನ ಶಾಕುಂತಲೆ " ನಿಮಗೆಲ್ಲರಿಗೂ ಗೊತ್ತು. ಆದರೆ ಇಲ್ಲಿ ನಾನು ನಿಮಗೆ ಹೇಳುತ್ತಿರುವುದು ಅಮಾಯಕ ಯುವತಿಯೊಬ್ಬಳನ್ನು ಪ್ರೀತಿಸಿ, ಬಾಳ ಪಯಣವು ಆರಂಭವಾಗುವ ಮೊದಲೇ ನಡುನೀರಿನಲ್ಲಿ ಕೈಕೊಟ್ಟು ಓಡಿ ಹೋಗಿರುವ ಆಧುನಿಕ ಯುವಕ ದುಷ್ಯಂತನೊಬ್ಬನ ಪ್ರೇಮಗಾಥೆ

ಶಕುಂತಲೆ

ನಮ್ಮ ಶಕುಂತಲೆ ಕಾಯುತ್ತಿದ್ದಾಳೆ
ಹೃದಯದರಸ
ದುಶ್ಯಂತನ ನಿರೀಕ್ಷೆಯಲ್ಲಿ

ಕೊಳದ ತಿಳಿನೀರಿನಂತೆ
ನಿರ್ಮಲವಾದ, ನಿಷ್ಕಲ್ಮಶ
ಮನಸಿನಾ ಹುಡುಗಿ

ಕುಡಿನೋಟದಾ ಕಲ್ಲನೆಸೆದು
ಹುಡುಗಿಯ ಮನದಾಳದಿ
ಮನೆ ಮಾಡಿದ, ಪ್ರೇಮಜಾಲವ ಬೀಸಿ

ಮನದೊಳಗೆ ಪ್ರೇಮ ಬೀಜಾಂಕುರಗೈದು
ಕಣ್ಣಿನಾಳದ ಕನಸುಗಳಿಗೆ ವರ್ಣಗಳ ಸುರಿದು
ಪ್ರೇಮಾಗ್ನಿಯಲಿ ತನು-ಮನಗಳ ತರ್ಪಣಗೈದ

ಆಸೆಗಣ್ಣಿನ ಹುಡುಗಿ,
ಚಿಗುರು ಮೀಸೆಯ ಹುಡುಗ
ವಿಹರಿಸಿದರು ಪ್ರೇಮಸಾಗರದಿ

ತೇಲುತ್ತ, ಮುಳುಗುತ್ತ
ದಡವ ಸೇರುವ ಮುನ್ನ
ಕಣ್ಮರೆಯಾದನೇ ಹೃದಯದರಸ

ಮನದಾಳದಿ ಮೊಳೆತ ಪ್ರೇಮ
ಸುಂದರ ಕನಸುಗಳ ಕನವರಿಸುತ್ತ
ಪ್ರಸವಿಸಿತು ಕಟುಸತ್ಯವ

ಶಕುಂತಲೆ ಕಾಯುತ್ತಿದ್ದಾಳೆ
ಹಲವು ವಸಂತಗಳಿಂದ
ದುಶ್ಯಂತನ ಆಗಮನಕ್ಕಾಗಿ

ಹಾ!!! ಮರೆತೆ
ಭರತನೂ ಕಾಯುತ್ತಿದ್ದಾನೆ
ತಾಯ ಆಸೆಗಳಿಗೆ ನೀರೆರೆಯುತ್ತ

ತಂದೆ ಎಂಬುವ ಪ್ರಾಣಿ
ಇಂದು-ನಾಳೆ
ಎಂದಾದರೂ ಬರುವನೆಂದು

ವಿರಹ ....

ವಿರಹ

ದೂರ ಎಷ್ಟಾದರೇನು
ಎಲ್ಲೆಯನು ಮೀರಿ ಹೋದರೇನು
ನಲ್ಲೆಯಾ ನೆನಹುಗಳು
ನೆರಳಂತೆ ಬೆಂಬತ್ತಿ
ಕಾಡುತಿಹವು ಹಗಲಿರುಳು

ದೇಶ ಯಾವುದಾರದರೇನು
ಪರದೇಶಿಯಾದರೇನು
ಕಾಲ ಮಿತಿಗಳನು ಮೀರಿ
ಅನುಗಾಲ ಕೇಳುವೆ ವಿರಹಗಾನವನು
ಹೃದಯದಾಳದಿಂದ

ಸಾಗರದ ಅಲೆಗಳಂತೆ
ಅವಿರತವಾಗಿ ಅಪ್ಪಳಿಸುತ್ತಿವೆ
ನೂರು-ಸಾವಿರ ಸಾರಿ ನಿರಂತರವಾಗಿ
ಭೋರ್ಗರೆವ ಸದ್ದು ಅಡಗಿಹುದು
ಮನದಾಳದಿ ಒಮ್ಮ ಇಣುಕಿನೋಡು

ಮನಸು ಬರಿದಾಗಿದೆ
ಹೃದಯದಿ ರಕ್ತ ಸೋರುತಿದೆ
ಮತ್ತೆ ಏನೇನೂ ಆಗಿದೆ, ಆದರೆ
ವಿರಹವೊಂದೇ ಕೊರೆಯುತಿದೆ
ಅನುದಿನವೂ ಅನುಕ್ಷಣವೂ

ಜಾತಿ-ಬೇಧಗಳ ಮೀರಿ ....

ಅದೇ ತಾನೇ
ಜನ್ಮಪಡೆದು
ಅಚ್ಚರಿಯ ಕಂಗಳಲಿ
ಜಗವ ನೋಡುತಿರುವ
ಹಸುಳೆಯನು ಕಂಡು
ಹೇಳಲಾಗದು
ಜಾತಿ, ಕುಲ ಗೋತ್ರಗಳನು

ನಸುನಗುವ ಹಸುಳೆಯೂ
ಅರಿಯದು
ತಾನು ರಾಮನೋ, ರಹೀಮನೋ
ಅಥವಾ ಬೇರೆ ಇನ್ಯಾರೋ....
ಎಂಬುದನು

ಮರಣಗೊಂಡು
ಪಂಚಭೂತಗಳಲ್ಲಿ ಮತ್ತು
ಮಣ್ಣಿನಲಿ ಲೀನವಾದ
ಮಹನೀಯರೆಲ್ಲ
ಅಸ್ಥಿಗಳನು ಅಗೆದು ನೋಡಿ
ಹೇಳಲಾಗದು ಅವರ ಭೂತಕಾಲದ
ಜಾತಿ, ಕುಲ ಗೋತ್ರಗಳನು

ನಶಿಸಿಹೋಗಿರುವ ಜೀವದ
ಕುಲಗೋತ್ರಗಳನು
ಹೇಳಲಾರೆ ನೀನು
ಅಸ್ಥಿಗಳೂ ಅರಿಯವು
ತಮ್ಮ ಗತಕಾಲದ ಅಸ್ಥಿತ್ವವನು

ಮಹಾತಾಯಿ ಮಡಿಲಿಂದ
ಭೂತಾಯ ಒಡಲನ್ನು
ಸೇರುವಾ ಈ ಬಾಳ ಪಯಣದಲಿ
ಜಾತಿ-ಬೇಧಗಳ ಮೀರಿ
ಬಾಳುವವನೇ ನಿಜ ಮನುಜ ನೋಡಾ .......

ಬುದ್ಧ ಭ್ರಮಣ

ಗೌತುಮ ಬುದ್ಧ
ಮಧ್ಯ ರಾತ್ರಿಯಲ್ಲಿ
ಎದ್ದು ಹೋಗಿದ್ದು . . . . .




ಸಂಸಾರ ತಾಪತ್ರಯಗಳನು
ತಾಳಲಾರದೆ ಹೋಗಲಿಲ್ಲ
ಹೆಂಡತಿ ಮಕ್ಕಳ ಕಾಟವನು
ತಾಳಲಾರದೆಯೂ ಅಲ್ಲ






ನಿದ್ರೆ ಬರಲಿಲ್ಲವೆಂದಲ್ಲ
ಸಕಲ ಸುಖ, ಐಶ್ವರ್ಯಗಳ ತೊರೆದು
ಬುದ್ಧಿ ಭ್ರಮಣೆಯಿಂದ
ಖಂಡಿತವಾಗಿಯೂ ಇಲ್ಲ


ರಾಜಭೋಗಗಳ ಬಿಟ್ಟು
ತನ್ನವರೆಲ್ಲರನು ತೊರೆದು
ಕಾಳ ರಾತ್ರಿಯಲಿ ಕಣ್ಮರೆಯಾದರೂ
ಲೋಕದಲಿ ಬೆಳಕಾಗಿ ನಿಂತ


ಅಹಿಂಸೆ, ಸಹಬಾಳ್ವೆ ಶಾಂತಿ
ಸಂದೇಶಗಳ ಸಾರಿ
ಮೇಲು ಕೀಳುಗಳನು ಮೀರಿ
ಸಾರಿದ "ಬುದ್ಧಂ ಶರಣಂ ಗಚ್ಛಾಮಿ"


ಯುಗಯುಗಾಂತರದಲಿ ಅಳಿಯದಂತಹ
ಬೌಧ್ಧ ಧರ್ಮವ ಸಾರುತ
ನಸುನಗುತ ನಿಂತ
ಜಗಕೆಲ್ಲ ಬೆಳಕಾಗಿ

Monday, March 8, 2010

ನಾಗರೀಕತೆ

ದೂರ ಬೆಟ್ಟದಾಚೆ
ನದಿ ತೀರದಲ್ಲಿ
ಮಂಜು ಮುಸುಕಿದ ಹಾದಿಯಲ್ಲಿ
ಕಂಡೂ ಕಾಣದಂತಿರುವ
ಗೋಪುರದ ಬೀದಿಯಲಿ
ಎಡಬದಿಯ ಮೂರನೇ ಗುಡಿಸಲು
ನಮ್ಮದಾಗಿತ್ತು


ಹಸಿರು ತುಂಬಿದ ಸಹ್ಯಾದ್ರಿ ಸಾಲಿನ
ಮಂಜು ಮುಸುಕಿದ ಹಾದಿಯಲಿ
ಹರಿವ ನೀರಿನ ಜುಳು ಜುಳು ಸದ್ದು
ನದಿ ತೀರದ ಮರಳಿನಲ್ಲಿ
ಅಳಿಸಿ ಹೋದ ಆ ನೂರು ಹೆಜ್ಜೆಗಳು
ಗತಕಾಲದ ಹರಿರುಹೊನ್ನಿಗೆ
ಮೂಕ ಸಾಕ್ಷಿಯಾಗಿವೆ


ನಾಗರೀಕತೆ ಬೆಳೆದಿದೆ ಇಂದು
ಕೆಂಪು ಮಣ್ಣಿನ ಹಾದಿಯಲಿ
ಹಸಿರೆಲ್ಲ ಕಳೆದುಹೋಗಿದೆ
ಗುಡಿಸಲು ಕಾಣೆಯಾಗಿದೆ, ಹೆಂಚಿನ ಮನೆಯೂ
ಕಾಂಕ್ರೀಟು ಕಾಲಿಟ್ಟಿದೆ ಈಗ
ಠೀವಿಯಿಂದ ಮನೆ ಮನೆಯಲ್ಲಿಯೂ ಕಾಲಿಟ್ಟಿದೆ ಟಿವಿ


ಬೆಟ್ಟಗಳ ಬಗೆದು, ಗುಂಡಿಗಳ ತೋಡಿ
ನಾಡ ಸಿರಿಯೆಲ್ಲ ಲೂಟಿಯಾಗಿದೆ
ತೇಗ, ಹೊನ್ನಿ, ಮತ್ತಿ ಶ್ರೀಗಂಧ ಮರಗಳು
ಕಾಣೆಯಾಗಿವೆ ಮಾನವನ ದುರಾಸೆಗೆ
ಕಾಡು ಕಾಣದಾಗಿದೆ
ಕುರುಚಲು ಗಿಡ-ಮರಗಳ ಮಧ್ಯೆ

ಮರಳಿ ಬಾ

ಮರಳಿ ಬಾ


ಮರಳಿ ಬಾ ಇನಿಯ
ಮರೆತು ಹೋಗುವ ಮುನ್ನ


ಮನದಾಳದಿ ಬಿತ್ತಿರುವ
ಪ್ರೇಮ ಬೀಜ ಕುಡಿಯೊಡೆದು
ಮುಗಿಲ ನೋಡುವ ಮುನ್ನ
ಮರಳಿ ಬಾ ಇನಿಯ


ನೀ ದೂರ ಇದ್ದರೇನು
ಹೃದಯಾಂತರಾಳದಲಿ
ಎಡಬಿಡದೆ ಮೊರೆಯುವದು
ನಿನ್ನ ನೆನಪಿನ ಅಲೆಯು


ಕರಿಮೋಡದಂಚಿನಲಿ
ಹೊನ್ನಕಿರಣದ ತೆರದಿ
ಮಿಂಚಿ ಮಾಯವಾಗುತಿಹ
ಮನದಾಸೆ ಬಾಡುವ ಮುನ್ನ


ಮರಳಿ ಬಾ ಇನಿಯ

Sunday, March 7, 2010

ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

ಅಲ್ಲಲ್ಲಿ ಚಲ್ಲಿಹುದು ವರ್ಣಗಳ ಚಿತ್ತಾರ
ಮಾಯದಾ ರೇಖೆಗಳ ಮೊದದಿಂ ಜಗದೊಡೆಯ
ಬಿಡಿಸಿದನು ವಿಧಿಲಿಖಿತದಂತೆ ಬದುಕಿನಾ ಚಿತ್ರ

ಮೂಡಣದಿ ಮೂಡುವಾ ಹೊನ್ನಕಿರಣದ ತೆರದಿ
ಮುನ್ನ ತಾ ಸೆಳೆವುದು ವರ್ಣಗಳ ಮೋಡಿಯಲಿ
ಬಾಲ್ಯದ ಆಟ ಹುಡುಗಾಟದಲಿ ಕಣ್ಮನವ ಸೆಳೆವುದು
ಚಂಚಲತೆಯ ಚಿತ್ರ

ಕನಸು ಕಾಮನೆಗಳ ಕೆರಳಿಸುವ ಯೌವನದ ರಂಗಿನಲಿ
ಸಪ್ತವರ್ಣಗಳ ಚಲ್ಲಿ ಸುಪ್ತ ಮನಸಿನಾಳದಲಿ
ಭಾವನೆಗಳ ಮೂಡಿಸಿ ಮತ್ತೆ ಮತ್ತೇರಿಸುವ
ಕನಸಿನಾ ಲೋಕದ ಕಾವ್ಯ ಚಿತ್ರ

ಹೆಣ್ಣು, ಹೊನ್ನು, ಮಣ್ಣುಗಳ ಹೊತ್ತು
ಮನದನ್ನೆ ಮಕ್ಕಳು ಬಂಧು ಮಿತ್ರರು ಎಲ್ಲರೊಡಗೂಡಿ
ನೋವು ನಲಿವುಗಳ ಸಮ್ಮಿಶ್ರಗೊಳಿಸಿ ಸ್ವರ್ಣ ಪಥದಲಿ ಸಾಗುವ
ಬರೆದನಾ ವಿಧಿಯು ಸಂಸಾರ ಚಿತ್ರ

ಬಾಳ ಮುಸ್ಸಂಜೆಯಲಿ ಬಣ್ಣಗಳು ಮಾಸಿ
ಬಾಲ್ಯ ಯೌವನದ ವರ್ಣಮಯ ನೆನಹುಗಳ
ಇಳಿವಯಸ್ಸಿನಲ್ಲಿ ಮೆಲುಕುತ್ತ ಮತ್ತೆ ಮತ್ತೆ
ಮನದಾಳದಲಿ ಮೂಡುವುದು ಮೂಲ ಚಿತ್ರ


ಭಿತ್ತಿ ಪರದೆಯ ಮೇಲೆ ಬಣ್ಣಗಳು ಅಳಿದಾಗ
ಉಳಿವುದೊಂದೇ ಸತ್ಯ
ಶೂನ್ಯ ಪರದೆಯ ಮೇಲೆ ಬಾಳಿ ಬದುಕಿದ ಕ್ಷಣವೂ
ಬರೀ ಮಾಯೆಯ ಆಟ
ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

Friday, March 5, 2010

ಕಳೆದುಕೊಂಡದ್ದು

ಪ್ರತಿಯೊಬ್ಬ ವ್ಯಕ್ತಿಯೂ ಬಾಲ್ಯದಿಂದ ಯೌವನದ ಪಯಣದಲ್ಲಿ ತಮ್ಮ ಮೂಲ ಗುಣಾವಗುಣಗಳನ್ನು ಕಳೆದುಕೊಳ್ಳುತ್ತಾರೆ. ಕಾಲಾನುಕ್ರಮದಲ್ಲಿ ಸೃಷ್ಟಿಯ ವೈಪರೀತ್ಯಗಳ ಪರಿಣಾಮದಿಂದ ಹಾವು ಪೊರೆಯನ್ನು ಕಳಚಿಕೊಳ್ಳುವಂತೆ ನಾವು ಬಾಲ್ಯದ ನಿಷ್ಕಲ್ಮಶ ಪ್ರೇಮ, ಸ್ನೇಹ, ಸತ್ಯ-ನಿಷ್ಠೆ, ನೇರವಾದ ನಡೆ-ನುಡಿ ಇವೆಲ್ಲವನ್ನೂ ಈ ಸಂಸಾರದ ಆಗುಹೋಗುಗಳ ಮಧ್ಯದಲ್ಲಿ ಕಳೆದುಕೊಳ್ಳುತ್ತೇವೆ. ಬಾಲ್ಯದಲ್ಲಿ ಇದ್ದುದನ್ನು ಇದ್ದಂತೆಯೇ ಹೇಳುವ ಆ ಧೈರ್ಯ, ಸೃಷ್ಠಿ ಸೌಂದರ್ಯವನ್ನು ನೋಡುವ ನಿಷ್ಕಲ್ಮಶ ನೋಟ, ಆತ್ಮಸಾಕ್ಷಿಗೆ ಅನುಗುಣವಾದ ನಮ್ಮ ನಡೆ-ನುಡಿ ನಾವು ಪ್ರಾಯಕ್ಕೆ ಬರುತ್ತಿದ್ದಂತೆಯೇ ನಮಗರಿವಿಲ್ಲದಂತೆ ಕಣ್ಮರೆಯಾಗುತ್ತವೆ.

ಕಳೆದುಕೊಂಡಿದ್ದೇನು ???

ಕಳೆದುಕೊಂಡಿದ್ದೇವೆ ನಾವು
ನಮ್ಮತನವನು
ಬಾಲ್ಯದಿಂ ಯೌವನದ ಪಯಣದಲ್ಲಿ

ಕಳೆದುಕೊಂಡಿದ್ದೇವೆ ನಾವು
ಆತ್ಮಸಾಕ್ಷಿಯನ್ನು
ಮೇಲಿನವರನ್ನು ಮೆಚ್ಚಿಸಲು
ಸುಳ್ಳು ಗುಣಗಾನವನ್ನು ಮಾಡುತ್ತ
ಕೆಳಗಿನವರ ಮೆಚ್ಚುಗೆ ಗಳಿಸಲು
ಪೊಳ್ಳು ಆದರ್ಶಗಳನ್ನು ತೋರುತ್ತ

ಕಳೆದುಕೊಂಡಿದ್ದೇವೆ ನಾವು
ಶ್ರವಣ ತಾಳ್ಮೆಯನು
ಬುದ್ಧಿವಾದವನು ಹೇಳುವ ಗುರು-ಹಿರಿಯರ
ಹಿತನುಡಿಗಳಿಗೆ ಹಿತ್ತಾಳೆ ಕಿವಿಯಾಗಿ
ಅವರಿವರ ಸಮಯಸಾಧಕ
ಮುಖಸ್ತುತಿಗೆ ಮರುಳಾಗಿ

ಕಳೆದುಕೊಂಡಿದ್ದೇವೆ ನಾವು
ನಮ್ಮ ನೇರ ನಡೆ-ನುಡಿಯನ್ನು
ಬೆಳೆಸಿಕೊಂಡಿದ್ದೇವೆ
ಅವರಿವರನ್ನು ಮರುಳಾಗಿಸುವ
ಮಾತಿನ ಮೋಡಿಯನ್ನು

ಕಳೆದುಕೊಂಡಿದ್ದೇನೆ ನಾವು
ಆತ್ಮಸಾಕ್ಷಿ, ಸತ್ಯ-ನಿಷ್ಠೆಗಳ ಮೆರೆವ
ನಿರ್ಮಲ ನೋಟವನು
ಹೆಣ್ನು-ಹೊನ್ನು ಮಣ್ಣುಗಳ ಲೋಭದಲಿ
ವಿಷಯಾಸಕ್ತ ಕಾಮನೆಗಳ ಪೊರೆಯಲಿ
ಬೆಳೆಸಿಕೊಂಡಿದ್ದೇನೆ ಕಾಮಾಲೆ ದೃಷ್ಟಿಯನು