Tuesday, July 12, 2011

ಅಳಲು

ಮೂಲೆಯಲ್ಲಿ ಇಟ್ಟಿರುವ

ಒರಳು ಕಲ್ಲು
ನಿಶ್ಚಲದಿ ನಿಂತಿರುವ ಒನಕೆ
ಹಳೆಯ ನೆನಪುಗಳ
ಪಳೆಯುಳಿಕೆಯಂತೆ
ಮನವು ಜಡವಾಗಿದೆ


ಹೊಸ-ಹೊಸ ಆವಿಷ್ಕಾರಗಳು
ನೂರಾರು ಸಲಕರಣೆಗಳು
ಗುಂಡಿ ಒತ್ತಿದರೆ
ಕ್ಷಣಮಾತ್ರದಲಿ ಸಿಗುವ
ಸೌಕರ್ಯಗಳು
ನನ್ನೆಡೆಗೆ ಕಣ್ಣೆತ್ತಿಯೂ
ನೋಡದಂತೆ ಮಾಡಿವೆ


ಹಬ್ಬ-ಹರಿದಿನಗಳಲಿ ಪೂಜೆ
ಮನೆಯ ಮಹಾಲಕ್ಷ್ಮಿಯ ಪಟ್ಟ
ಧೂಫ ದೀಪವ ಬೆಳಗಿ
ಮತ್ತೆ ನಾಮವನು ಬಳಿದು
ಮತ್ತೊಂದು ಹಬ್ಬ ಬರುವವರೆಗೆ
ಮರೆತುಬಿಡುವರು ಎನ್ನ


ಎತ್ತುವುದು, ಕುಟ್ಟುವುದು
ಯಾರಿಗೂ ಇಲ್ಲ ಮನಸು
ಗುಂಡಿ ಒತ್ತುವುದರಲ್ಲಿಯೇ
ಅವರ ಮನಸು
ಹುಚ್ಚು ಕುದುರೆಯನೇರಿದ ಅವಸರ
ಎಲ್ಲರಿಗೂ ಹೊಸತನದ ಹಂಬಲ
ಹೊಸದಕ್ಕೇ ಬೆಂಬಲ

No comments:

Post a Comment