Monday, December 10, 2012

ಸುಮ್ಮನೇ

ಏನು ಮಾಡ್ತಿದ್ದೀರಿ

ಆಗಂತುಕರೊಬ್ಬರ ಉವಾಚ
ಸುಮ್ಮನೇ ಕುಳಿತಿರುವೆ
ಎಂದೆನಾದರೂ
ಉತ್ತರಿಸುವಾಗ ತಡವರಿಸಿದೆ

ಮನಸಿಗೆ ಕಸಿವಿಸಿ
ಸುಮ್ಮನೆ ಕುಳಿತದ್ದು ಯಾರು...
ಜಡವಾದ ದೇಹ ಮಾತ್ರ
ಮಸನೆಂದೂ ಜಡವಾಗಲಿಲ್ಲ
ಶೂನ್ಯ ಕವಿದರೂ
ಹುಡುಕಾಟ ನಿಲ್ಲುವುದಿಲ್ಲ

ಹುಚ್ಚುಗುದುರೆಯನೇರಿ
ಲಂಗು ಲಗಾಮಿಲ್ಲದೇ
ಕಾಲ-ದೇಶಗಳ ಗಡಿಯನ್ನು ದಾಟಿ
ಅಖಿಲಾಂಡ ಬ್ರಹ್ಮಾಂಡವನು
ಕಲ್ಪನಾತೀತ ವೇಗದಲ್ಲಿ
ತಿರುಗುತ್ತಿರುತ್ತದೆ

ನಿರೀಕ್ಷೆ

ಏಕಾಂಗಿಯಾಗಿ

ಅನಂಗರ ನಡುವೆ
ಬಸ್ ಸ್ಟಾಪಿನಲ್ಲಿ ನಿಂತು
ಬೆದರಿದ ಹರಿಣದಂತೆ
ಅತ್ತಿತ್ತ ನೋಡುತ್ತಿರುವ
ಚಂಚಲಗಣ್ಣುಗಳ ಚೆಲುವೆ

ಆಗಾಗ ತಿರುಗಿ
ಉತ್ತರ ದಿಕ್ಕಿನೆಡೆಗೆ
ನಿರೀಕ್ಷೆಯ ನೋಟ...
ಬಾರದಿರುವ ಇನಿಯನ ನೆನೆದು
ಬರುವ ನಿಟ್ಟುಸಿರೇ ಉತ್ತರ

ಒಂಟಿ ಚೆಲುವೆಯ
ಸುತ್ತ ಸುಳಿದಾಡುವ
ಚಪಲ ಚೆನ್ನಿಗರಾಯರ
ಸಹಸ್ರಾಕ್ಷನಂತೆ ಇರಿಯುವ
ಕಾಮಾಲೆ ಕಣ್ಣುಗಳ ನೋಟ

ಬದುಕನ್ನೇ ಬೊಗಸೆಯಲಿಟ್ಟು
ಹನಿ ಪ್ರೀತಿಗಾಗಿ ಕನವರಿಸಿ
ಕಾಯುವುದೊಂದೇ ಭಾಗ್ಯ
ನುಂಗಬಾರದೇ ಅವನಿ
ಸೆಳೆಯಲಾರದೇ ಆಗಸ
ಸಾಕು ಈ ಕಾಯುವ ಕೆಲಸ

ಕಣ್ಣು-ಮುಚ್ಚಾಲೆ

ಸನಿಹದಲ್ಲೆಲ್ಲಿಯೂ

ಇರದ ನಲ್ಲೆಯ
ನೆನೆಯುತ
ವಿರಹದ ಬೇಗೆಯಂದ
ಕಣ್ಣು ಮುಚ್ಚಿದರೆ
ಕಣ್ಣ ರೆಪ್ಪೆಗಳ
ಅಡಿಯಿಂದ ಪ್ರತ್ಯಕ್ಷ್ಯ
ಆಗುವುದೇ ಅವಳು........

ಪ್ರೀತಿ ಶುರುವಾಯ್ತು
ಮೊದಲ ನೋಟದಿಂದ
ನೂರು ಮಾತುಗಳು
ಹೇಳದ
ಕಥೆಯನೆಲ್ಲವ ಹೇಳಿ
ಕಣ್ಣ ಸನ್ನೆಯಲ್ಲೇ
ಒಪ್ಪಿಕೊಂಡು, ಅಪ್ಪಿಕೊಂಡು

ಇರದಿದ್ದರೇನು
ಹತ್ತಿರ
ಹೃದಯದ ಚಿಪ್ಪಿನೊಳಗೆ
ಸವಿನೆನಪುಗಳ ಬಂಧಿಸಿ
ಮತ್ತೆ ನಲ್ಲೆಯ
ಜೊತೆಯಲ್ಲಿ
ಕಣ್ಣಾಮುಚ್ಚಾಲೆಯಾಟ

ವಿಪರ್ಯಾಸ

ಪುಸ್ತಕದ

ಕೊನೆಯ ಪುಟದಲ್ಲಿ
ರಟ್ಟಿನ ಮೇಲೆ
ಬರೆದಿರುವ ಅವಳ ಹೆಸರು
ಹಲವು ಬಾರಿ ಬರೆದು
ಅವರಿವರು ನೋಡಿಯಾರು
ಎಂಬ ಅಳುಕಿನಲಿ
ಕಾಟು, ಗೀಟು ಹೊಡೆದು...
ಅಳುಕಿಸಲೆತ್ನಿಸಿ
ಅದರಲ್ಲಿಯೇ
ನವ್ಯಕಲೆಯನ್ನೂ ಮೀರಿಸುವ
ಚಿತ್ರವನೂ ಬಿಡಿಸಿ
ಅಕ್ಕ-ಪಕ್ಕ
ಯಾರೂ ಇಲ್ಲದಾಗ
ಮನದಲ್ಲಿ ಸಂಚಲನ ಮೂಡಿಸಿದ
ಚಂಚಲೆಯ ನೆನೆಯುತಾ
ಏಕಾಗ್ರಚಿತ್ತದಿಂದ
ರವಿವರ್ಮನಂತೆ ಅವಳ
ಚಿತ್ರವನೂ ಬಿಡಿಸಿ

ಕಾಲೇಜು ಕಟ್ಟೆಯನು
ಹಲವಾರು ಸಲ ಎಡವಿ
ಬಾಳ ಕಟ್ಟಿಕೊಳ್ಳುವ
ಹಂಬಲದಲಿ ಹಗಲಿರುಳು
ಅಲೆದಾಡಿ
ಹಸಿವು-ಬಾಯಾರಿಕೆಗಳ
ಹೊತ್ತು ತಿರುಗಿ
ಮರಳಿ ಗೂಡಿಗೆ ಬಂದಾಗ
ಕಿಲುಬು ಕಾಸು ಕಾಣದಿರುವಾಗ
ಹಗಲಿರುಳೂ ಉರುಹೊಡೆದು
ಗಳಿಸಿದ ಪದವಿಯನೆ ನೆನೆದು
ಹಳೆಯ ಪುಸ್ತಕಗಳನು
ರದ್ದಿ ಹಾಕುವ ಸಮಯದಿ
ಮತ್ತೆ ಪ್ರತ್ಯಕ್ಷವಾಯಿತು
ಕೊನೆಯ ಪುಟ
ಕಣ್ಮುಂದೆ ಮೂಡಿದ
ಅವಳು
ಪಿಸುಮಾತಿನಲಿ ಉಲಿದಳು
ಗೆಳೆಯಾ ಮರೆಯದಿರು
ಇದು ಬದುಕಿನ ಮೊದಲ ಪುಟ

ಬೆಳಕು

ಕಂಬಗಳ ನಡುವೆ

ತೂರಿ ಬರಿತಿರುವ
ಹಣತೆಯ ಬೆಳಕು
ಸೆಳೆಯುತ್ತಿದೆ

ನೆರಳುಗಳ ಮಧ್ಯದಲಿ
ಬೆಳಕಿನ ದಾರಿಯಲಿ
ಸಾಗುತಿರುವೆ...
ಗಮ್ಯವ ಹುಡುಕುತ್ತಾ

ಬೆಳಕು ಬೇಕು
ಮುಂದೆ ಸಾಗಲು
ನೆರಳಿನಾಟವ ಮೀರಿ
ಮುನ್ನಡೆಯಬೇಕು

ಸೂರಿನಡಿಯಿಂದ
ಪಾರಾಗುವ ಹಂಬಲ
ತೆರೆದ ಆಗಸದಿ ಮಿಣುಕುವ
ನಕ್ಷತ್ರಗಳ ಬೆಳಕಲಿ
ದಾರಿ ಬೆಳಗಬೇಕು

Wednesday, August 1, 2012

ಸಖೀಗೀತ

ಶ್ರಾವಣದ ಸಂಜೆ
ಇಂದು ಮಂಗಳವಾರ
ಹೊರಟಿಹಳು ಅವಳು

ಇಲ್ಲಿ ನಿಲ್ಲಲಾರದು
ಅವಳ ಪಯಣ
ನಾನಾದರೂ ಎಷ್ಟು ದಿನ
ಮತ್ತೆ ಸೇರುವ ಆಸೆಯೊಂದೇ

ಭಾವನೆಗಳನೆಲ್ಲ
ಗುಡಿಸಿ ಗೋಪುರ ಕಟ್ಟಿ
ಎನ್ನ ಮನದಿ ನಿರ್ಮಿಸಿದ
ಅಂತಃಪುರಕೆ ಸೇರುತಿಹಳು

ಖಾಲಿ-ಖಾಲಿ ಮನಸು
ಅಂತರಾಳದಲ್ಲಿ
ಅವಳದೇ ಪ್ರತಿಬಿಂಬ
ಅದೇ ಮುಗುಳ್ನಗು ಬೆಳಗುತಿಹುದು

ಇಲ್ಲಿ ಮಿಡಿಯುವ
ಎನ್ನ ಹೃದಯರಾಗಕೆ
ಎಲ್ಲಿ ಹೋದರೂ ಅಲ್ಲಿಂದಲೇ
ತಾಳ ಹಾಕುವುದು ಅವಳ ಹೃದಯ

ಕಾಣದಿದ್ದರೇನು ಇನ್ನು
ಕಣ್ಣೆದುರು ಅವಳು
ಕಣ್ಣು ಮುಚ್ಚಿದಾಕ್ಷಣ ನಗುವಳು
ಕಣ್ರೆಪ್ಪೆಯಾ ಮರೆಯಿಂದ

Saturday, June 30, 2012

ಕಾವ್ಯ ಕನ್ನಿಕೆ

ಅವಳು, ಅವಳೆನಗೆ
ಜೀವಂತ ಕವಿತೆ
ನನ್ನ ಬಾಳಿನ ಜೀವಂತಿಕೆ
ಅವಳೊಂದು ಜೀವಂತ ಕವನ

ಸುತ್ತ ಸುಳಿಯು ತಂಗಾಳಿಗೆ
ಅತ್ತಿತ್ತ ಹಾರುವ
ಅವಳ ಮುಂಗುರುಳು
ಅವಳೊಂದು ಜೀವಂತ ಕವನ

ಜಗದ ಎಲ್ಲವನ್ನೂ
ಅಚ್ಚರಿಯಿಂದ ನೋಡುವ
ಅವಳ ಆ ಕಣ್ಣುಗಳು
ಅವಳೊಂದು ಜೀವಂತ ಕವನ

ಎನ್ನ ಹೃದಯಕ್ಕೆ
ತಂಪನ್ನೀಯುವ
ಅವಳ ಮಂದಹಾಸ
ಅವಳೊಂದು ಜೀವಂತ ಕವನ

ಸೃಷ್ಟಿಯ ಸೌಂದರ್ಯವನ್ನೇ
ಹೊತ್ತು ತಿರುಗುವ
ಅವಳ ಸುಂದರ ಮೈಮಾಟ
ಅವಳೊಂದು ಜೀವಂತ ಕವನ

ಒಂದಿನಿತೂ ಬೇಸರಿಸದಂತೆ
ಎಲ್ಲವನ್ನೂ ಚುರುಕಾಗಿ ಮಾಡುವ
ಅವಳ ಚಲನ-ವಲನ
ಅವಳೊಂದು ಜೀವಂತ ಕವನ

ಅತ್ತಿಂದಿತ್ತ ಓಡಾಡುವಾಗ
ಬೆನ್ನ ಹಿಂದೆ ಓಲಾಡುವ
ಅವಳ ಹೆರಳು
ಅವಳೊಂದು ಜೀವಂತ ಕವನ

ಸುತ್ತ ಸುಳಿಯುವ
ತಂಗಾಳಿಯಂತೆ ಮುದನೀಡುವ
ಅವಳ ಒಯ್ಯಾರ
ಅವಳೊಂದು ಜೀವಂತ ಕವನ

ಸಖೀಗೀತ

ಸಖೀ....
ನೀನಿಲ್ಲದ ಮನೆ
ಕಾರಿರುಳ ಆಗಸದಂತೆ
ಮನದಲ್ಲಿಯೂ ಬೆಳಕಿಲ್ಲ
ಮನೆಯೂ ಅಮವಾಸ್ಯೆ
ಚಂದ್ರಿಕೆಯಿಲ್ಲ

ಆದರೂ ನಭೋಮಂಡಲದಿ
ಮೆರೆಯುವ ನೂರು
ತಾರೆಗಳ ತೆರದಿ ಮಿನುಗುವ
ಚಂಚಲೆಯರ ನಯನಗಳು
ಮಿಣುಕುತ್ತವೆ ಚಂದ್ರಿಕೆಯಂತಲ್ಲ

ಎದೆಯಾಳದಲಿ
ಭುಗಿಲೇಳುವ ವಿರಹದಾ ತಾಪ
ಮೇಲೆ ನಿನ್ನ ಸವಿನೆನಪುಗಳ
ತಣ್ಣನೆಯ ಗಾಳಿ
ಕಣ್ಣು ಮುಚ್ಚಿದಾಗಲೆಲ್ಲ ಕಾಣುವ
ಚಂದ್ರಿಕೆಯ ಬಿಂಬ

ನೀನಿಲ್ಲ ಮನೆಯಲಿ
ಮನದಾಳದಿ ಮಿನುಗುವ
ಚಂದ್ರಿಕೆಯ ನೆನಹುಗಳು
ವಿರಹದ ಬೇಗೆಯಲ್ಲಿಯೂ
ಎನ್ದ ಮನದುಂಬಿರುವ ನೀನು
ಇಲ್ಲಿ ಇಲ್ಲವೆಂದು ಹೇಗೆ ಹೇಳಲಿ.......

ಹಾಗೇ ಸುಮ್ಮನೇ....

ಅಂದು ಹಾಗೆಯೇ ಇತ್ತು
ಅವಳು ಬರುವ ದಾರಿಯಲಿ
ರಸ್ತೆ ಬದಿಯ ಮರಗಳಿಂದ
ಉದುರಿದ ಹೂರಾಶಿ

ಮಂದ ಮಾರುತದಿ
ಪರಿಮಳವೂ ಹರಡುತಿತ್ತು
ಮೆಲ್ಲಗೆ
ಅವಳ ಮುಗುಳ್ನಗೆಯ ಸೊಬಗಿನಲಿ

ಇಂದಿಗೂ ಅರಳಿದೆ
ಅವಳ ಪ್ರೀತಿ ಎನ್ನ
ಮನದೊಳಗೆ, ಮನೆಯೊಳಗೆ
ಅನುರಾಗದ ಪರಿಮಳ
ಮೈಮನಗಳಲಿ ತುಂಬಿದೆ

ಹಸಿರಾಗಿದೆ ಮನದಿ
ಆ ದಿನಗಳ ನೆನಪು
ಹಳತಾಗಿಲ್ಲ ಇನ್ನೂ ಆ ಸೊಬಗು
ಅನುಕ್ಷಣವೂ ಕಳೆದು
ಹೋಗುತ್ತಿದ್ದೇನೆ ಅವಳ ಪ್ರೇಮರಾಗದಲಿ

ಸಖೀಗೀತ

ಸಖೀ....
ಮರೆತು-ಬಿಡು ಎನ್ನ
ನೀನು ಅಂತ ಹೇಳುತ್ತಲೇ
ಅವಶೇಷಗಳ ಅಡಿಯಲ್ಲಿ
ಶವವಾಗಿ ಅಡಗಿ ಕುಳಿತಿರುವ
ಆ ನೆಹುಗಳಿಗೆಲ್ಲ
ಮರು ಜೀವ ಕೊಟ್ಟಿಯಲ್ಲಾ....

ಕವಲು ದಾರಿಯಲಿ
ಬಹುದೂರ ಸಾಗಿದರೂ
ಮತ್ತೆ ಮತ್ತೆ ನಿನ್ನ ನೆನಪು
ಮರುಕಳಿಸುವುದಲ್ಲಾ.....

ಹೊರಡುವ ಮುಂದೆ
ನಿನ್ನ ಕಣ್ಣಂಚಿನಿಂದ
ಜಾರಿದ ಕಂಬನಿಯನು ಹೊತ್ತು
ಈ ಜೀವ ಭಾರವಾಯಿತಲ್ಲಾ....

ಜಗವನೆಲ್ಲ ಅಲೆದರೂ
ಗೂಟಕೆ ಕಟ್ಟಿರುವ ದನದಂತೆ
ನಿನ್ನ ನೆನಹುಗಳ ಸುಳಿಯಲ್ಲಿ
ಈ ಜೀವ ಸುತ್ತುವದಲ್ಲಾ....

ಸೇರದಾ ದಾರಿಯಲಿ
ಸಾಗಿ ನಡೆದರೂ ನಾವು
ಮತ್ತೊಂದು ಜನುಮದಿ
ಮತ್ತೆ ಸೇರುವಾಸೆಯನು
ಈ ಹೃದಯ ಅನವರತ ಮಿಡಿಯುವದಲ್ಲಾ....

ಸಖೀಗೀತ

ಸಖೀ....
ಮೌನಕ್ಕೆ
ಶರಣಾಗಿದ್ದೇನೆ ನಾನು
ಈಗೀಗ
ನೀನಿಲ್ಲದ ಕ್ಷಣಗಳ
ಎಣಿಸುವಾಗ

ಮೌನವೇ
ಲೇಸೆನಗೆ ಇಂದು
ನಾನು ನನ್ನೊಳಗೆ
ಅವಿತಿಟ್ಟುಕೊಂಡಿರುವ
ನಿನ್ನೊಲವ ಸವಿಯಲು

ಪ್ರೇಮ ಸಾಗರದಿ
ನಾವೀರ್ವರೂ ಹೆಕ್ಕಿ ತೆಗೆದ
ಮುತ್ತುಗಳ ಹೊಂದಿಸಿ
ಭಾವನೆಗಳ ಪೋಣಿಸುತ
ನಿನಗೆಂದೇ
ಮಾಲೆ ಕಟ್ಟುತ್ತಿದ್ದೇನೆ ಮನದಿ.....

ಅನಿರೀಕ್ಷಿತ

ಗೆಳಯಾ...
ನೋಡ ನೋಡುತ್ತಿದ್ದಂತೆ
ಹಾಗೇಕೆ ರಸ್ತೆ ಬದಲಾಯಿಸಿದೆ ನೀನು
ಅರೆಕ್ಷಣದಿ ಕವಲು ದಾರಿಯಲಿ
ದೂರ ಸಾಗಿಬಿಟ್ಟೆವಲ್ಲಾ....

ದುಂಡಗಿನ ಜಗವು
ಮತ್ತೆ ಸೇರಿಸಿತಲ್ಲಾ
ಮತ್ತೊಮ್ಮೆ ಕಣ್ಣನೋಟದಿ
ಬಂಧಿಯಾದೆವಲ್ಲಾ...

ಮುಖದಲ್ಲಿ ಆವರಿಸಿದ ಸುಕ್ಕಿನ ಗೆರೆಗಳು
ಒಂದೊಂದು ಗೆರೆಯಡಿಯೂ
ನೂರು ನೆನಹುಗಳು
ಬೆಳ್ಳಿಕೂದಲಿನಡಿಯ ಸಿಕ್ಕುಗಳು
ಗಂಟಿಕ್ಕಿರುವ ನೆನಪಿನಾ ಬುತ್ತಿ

ಅಂದು ಕೈಜೋಡಿಸಿ
ಜಿಗಿಯುತ್ತಾ-ನೆಗೆಯುತ್ತಾ
ಬದುಕು ಎಂದರೇನೆಂದು
ಅರಿಯುವಾ ಮೊದಲೇ
ಕೈಬಿಡಿಸಿಕೊಂಡು ಪಯಣ ಸಾಗಿತಲ್ಲಾ...

ನಿನ್ನ ಕೈಹಿಡಿದಿರುವ ಆ ಪುಟ್ಟ ಪೋರಿ
ನನ್ನ ತೋಳಿನಾಸರೆಯಲಿ
ಬೆಚ್ಚಗೆ ಕುಳಿತಿರುವ ಎನ್ನ ಮಗು
ನಮ್ಮೀರ್ವರ ಕೈಗಳು
ಮತ್ತೆ ಸೇರದಂತೆ ಬಂಧಿಸಿವೆಯಲ್ಲಾ...

ಏನದು
ನಮ್ಮೀರ್ವರ ಸಂ-ಬಂಧ
ಮನದಲೆಲ್ಲೋ ವೀಣೆ ಮಿಡಿಯುತಿದೆ
ಮರೆತು ಹೋಗಿರುವ
ಬಾಳ ಸ್ವರವ ಹರಡುತಿದೆ

ಮತ್ತೆಂದೂ ಸೇರದು
ನಮ್ಮ ಕೈಗಳು
ಕುಣಿದು-ಕುಪ್ಪಳಿಸುವ ಕಾಲವಲ್ಲ
ಅಪ್ಪಳಿಸುತಿದೆ ಸಂ-ಸಾರ ಸಾಗರದ ತೆರೆಯು
ಅಲ್ಲಿಯೂ ಕಾಡುತಿದೆ ನಿನ್ನೊಲವಿನಾ ಸಂಗೀತ.....

ಬಿಸಿಲ ಪಾಡು

ಮನೆಯ ಮುಂದೆ
ಅಂಗಳದಲ್ಲಿ
ಹೂ-ಗಿಡಗಳ ಮೇಲೆ
ಬಡ ಹೆಂಗಸಿನ
ಹರಿದ ಸೀರೆಯಂತೆ
ಹರವಿದ ರಸ್ತೆಯ ಮೇಲೆ
ಹರಡಿದ ಬಿಸಿಲು

ದಾಹಕ್ಕೆ
ಬಾಯ್ದೆರೆದ ಭೂಮಿ
ಚಿವ್ ಗುಟ್ಟುವ ಗುಬ್ಬಚ್ಚಿ
ನೊಸಲಿನಲಿ
ಬೆವರ ಹನಿಯನು ಧರಿಸಿ
ಬಾಯಾರಿ
ಒಡಲ ಬೇಗೆಯನು
ತಣ್ಣಗಾಗಿಸಲು
ಭಿಕ್ಷೆ ಬೇಡುವ ಹುಡುಗ

ರಸ್ತೆಬದಿಯಲಿ
ಬಿದ್ದಿರುವ ಕಸ, ಕೊಳೆ
ಅತ್ತಿಂದಿತ್ತ ಹಾರಾಡುವ
ಅವರಿವರು ಏನೇನೋ
ತಿಂದು ಬೀಸಾಕಿದ
ಕಾಗದದ ಚೂರುಗಳು
ಬಿಸಿಲ ಧಗೆಗೆ
ಗಿಡ-ಮರಗಳು
ಮೈಕೊಡವಿದಾಗ
ಉದುರಿರುವ ತರಗೆಲೆಗಳ ರಾಶಿ

ಮಳೆ ಬೇಕು
ಇಳೆಗೆ, ಹಕ್ಕಿ-ಪಕ್ಷಿಗಳಿಗೆ
ತಲೆ ಮೇಲೆ ಕೈ-ಹೊತ್ತು
ಕುಳಿತಿರುವ ಅನ್ನದಾತನಿಗೆ
ದಣಿದು ಬಾಯಾರಿದ
ಬಡ ಜೀವಗಳಿಗೆ
ವರ್ಷಧಾರೆಯ ಸಿಂಚನವಾಗಲಿ
ತಣ್ಣಗಾಗಿಸಲಿ ಬೆಂದ
ಮನಸುಗಳಿಗೆ, ಭೂತಾಯಿಗೆ

ಸಖೀಗೀತ

ಸಖೀ....
ಭಿತ್ತಿಯ ಮೇಲೆ
ನಿನ್ನದೇ ಚಿತ್ತಾರ
ಕಾರಿರುಳ ಅಮವಾಸ್ಯೆಯ
ಆಗಸದಿ ಮಿನುಗುವ
ನೂರು-ಸಾವಿರ ತಾರೆಗಳ ತೆರದಿ
ಎತ್ತ ನೋಡಿದರೂ
ಮನದಲ್ಲಿ ಬೆಳಕು

ಚಂದ್ರಿಕೆಯ ಮೀರಿಸುವ
ನಿನ್ನ ಚೆಲುವು
ಕೃಷ್ಣ-ಶುಕ್ಲ ಪಕ್ಷಾತೀತ
ನಿನ್ನೊಲುಮೆಯ ಬೆಳಕು
ಎನ್ನ ಹಗಲು ಬೆಳಗುವದು
ನಿನ್ನ ತುಂಟ ನೋಟದಿ
ಇರುಳಿನಲಿ
ನಿನ್ನೊಲುಮೆಯ ಕ್ಷೀರಧಾರೆ

ಸಖೀಗೀತ

ಸಖೀ....
ಎನ್ನ ಮೌನದೊಳಗೂ
ನಿನ್ನ ಪಿಸುಮಾತುಗಳು
ಪ್ರತಿಧ್ವನಿಸುತ್ತವೆ....

ಮೌನದ ಮನೆಯೊಳಗೆ
ಮೂಲೆ-ಮೂಲೆಯಲ್ಲಿಯೂ
ನಿನ್ನದೇ ಒಡನಾಟ..

ಏಕಾಂತದಲಿ
ಎನ್ನ ಅಂತರಂಗದಲಿ
ನಿನ್ನದೇ ಪ್ರತಿರೂಪ....

ವಾಚಾಳಿತನವ ತೊರೆದಾಗ
ಪ್ರಪಂಚವೆಲ್ಲವ ಮರೆತು
ಮೌನದೊಳಗೆ ನಿನ್ನೊಡನೆ ಸಂಭಾಷಣೆ.....

ಹಾಗೇ ಸುಮ್ಮನೇ....

ಮನದಾಳದಿ
ಪ್ರೀತಿಯ ಮಳೆಗಾಲ
ಸುರಿದರೇನು
ಬೆಚ್ಚನೆಯ ಅನುಭೂತಿ
ಜೊತೆಗಿದ್ದರೆ ಮಾತ್ರ
ಭಾವನೆಗಳು
ಮೊಳಕೆಯೊಡೆಯುವುದು.....

ಮೌನದಲಿ ಕುಳಿತ
ಯುಗಳ ಜೋಡಿಯ
ಕಂಗಳು ಮಾತನಾಡುವಾಗ
ಅವುಗಳನೆಲ್ಲಾ ಪದಗಳ
ಮೂಸೆಯಲಿ ಸೆರೆಹಿಡಿಯಲು
ಮನದ ಶಬ್ದಕೋಶದಲಿ
ಬರೀ ಹುಡುಕಾಟ....

ಏನೋ ತೋಚಿದ್ದು

ಕಿಟಕಿಯಿಂದಾ
ತೂರಿ ಬರುವ ತಂಗಾಳಿಯಲಿ
ಕುಳಿತ ಕುರ್ಚಿಯ
ಎಡ-ಬಲ ಕಾಲಡಿಯಲ್ಲಿ
ಬಿರುಬಿಸಿಲಿನಲಿ
ನಳನಳಿಸುತ್ತಿರುವ ಹೂವಿನಲ್ಲಿ
ಹನಿ ನೀರಿಗಾಗಿ
ಹಪಹಪಿಸಿ ಬಾಯ್ದೆರೆದಿರುವ
ಭೂಮಿಯ ಕೊರಕಲಿನಲ್ಲಿ
ಎಲ್ಲೆಲ್ಲೂ ಚೆಲ್ಲಿವೆ


ಚೆಲ್ಲಾಪಿಲ್ಲಿಯಾಗಿ ಹರಡಿವೆ
ಅಕ್ಷರಗಳು
ಬೀಸುವ ಗಾಳಿಗೆ
ಚೆದುರಿಹೋದ ಕಾಗದದ
ತುಂಡುಗಳಂತೆ
ಎಲ್ಲಿ ನೋಡಿದರೂ
ಭಾವನೆಗಳು ಚದುರುತ್ತಿವೆ
ಕವಿತೆಯ ತುಣುಕುಗಳಂತೆ

ಒಪ್ಪವಾಗಿ ಓರಣವಾಗಿ
ಜೋಡಿಸಿ
ಭಾವನೆಗಳ ಪೋಣಿಸಿ
ಪುಟ್ಟ ಕವಿತೆಯೊಂದನ್ನು
ಬರೆಯಲೂ ಸಿಗದಂತ
ಚಂಚಲ ಮನಸು.....

ಬದುಕು

ಕಣ್ಣು ಹಾಯಿಸಿದಷ್ಟೂ
ಕಾಲಡಿಯಲಿ ಬಿದ್ದಿರುವ
ಬದುಕು....

ಅಕ್ಕಪಕ್ಕದಲಿ
ಅವರಿವರು ಬಂದು
ಸೇರಿದ ಪಯಣಿಗರು

ಆಗಾಗ ಧುತ್ತನೆ
ಎದುರಾಗುವ
ಕವಲು ದಾರಿಗಳು

ಮುಂದೆ ಸಾಗಬೇಕು
ಗಮ್ಯವು ಕಾಣದು
ಗುರಿಯ ತಲುಪಲು

ಎಡವಿದಾಗ ಎತ್ತಿ ಹಿಡಿದು
ಮುನ್ನಡೆಸಲು
ಸಂಗಾತಿಗಳು ಬೇಕು

ಸಖೀಗೀತ

ಸಖೀ
ನೀ ಎನ್ನೆದುರು
ಬಂದಾಗ
ಮಾತು ಮರೆತಂತೆ
ಮಾತನಾಡಲೂ ಬಾರದ
ಹಸುಳೆಯಂತೆ
ಕಣ್ಣುಗಳೇ ಮಾತನಾಡಲಿ
ಎನ್ನುವ ಹಂಬಲ

ಮೇರು ಶಿಖರವನೇರಿ
ಜಗವನೆಲ್ಲಾ ಕಂಡು
ಮೂಕವಿಸ್ಮಿತವಾಗುವ ಭಾವ
ಅಂತರಾಳದ ಭಾವನೆಗಳು
ಪದಗಳ ಹಂಗಿಲ್ಲದೇ
ಹರಿಯಲಿ ಎನ್ನುವಾ ಹಂಬಲ

ನೀ ನುಡಿಯಲಾರೆ
ಆದರೂ ಆರಿವುದೆನ್ನ ಮನ
ನಮ್ಮಿಬ್ಬರ
ನೋಟಗಳ ಮಂಥನದಲ್ಲಿ
ಉಕ್ಕಿ ಹರಿಯುವ
ಸಂತಸವೆಲ್ಲಾ ಪ್ರೇಮಾಮೃತ
ಮನಗಳು ಮಾತನಾಡುವಾಗ
ಮಾತುಗಳು ಬೇಕೇ !!!!

ಪಯಣ

ಕಾಲಡಿಯಲ್ಲಿ
ಭೂಮಿ ಜಾರುತಿದೆ
ಕಾಲಚಕ್ರದ
ಸುಳಿಗೆ ಸಿಲುಕಿ
ಜನ್ಮದಾರಭ್ಯದಿಂದ
ತೆವಳುತ್ತಾ ಸಾಗಿ
ಮಂಡಿಯೂರಿ
ಮತ್ತೆ
ಎದ್ದು ಓಡಾಡುವ
ಕಾಲಾಂತರದಿ

ಎಲ್ಲರೂ ನಕ್ಕು
ಗಲ್ಲ ಚಿವುಟಿ
ಮುಖದ ಚಂದ್ರಬಿಂಬದ
ಮಂದಹಾಸಕ್ಕೆ ಸೋತು
ಮುನ್ನಡೆಯುವ
ಕಾಲವೆಂದೋ
ಕಳೆದುಹೋಗಿದೆ

ಅತ್ತಿತ್ತ ಓಲಾಡುತ್ತಾ
ಎದ್ದು-ಬಿದ್ದು ನಡೆಯುವಾಗ
ಕೈಹಿಡಿದು ಮೇಲೆತ್ತಿ
ಮು್ನ್ನಡೆಸಿದವರು
ಯಾರು-ಯಾರೋ
ಹಿಂದಿರುಗಿ ನೋಡಿದಾಗ
ಅವರೆಲ್ಲರ ನೆರಳುಗಳು

ಹಸಿದು ಹಂಬಲಿಸಿ
ಕಂಬನಿಯ ಸುರಿಸಿದಾಗ
ಎತ್ತಿ ಬಿಗಿದಪ್ಪಿಕೊಂಡು
ಕೈತುತ್ತ ನೀಡಿ
ಉಂಬುದನೆ ಖುಷಿಯಿಂದ
ನೋಡಿ ನಲಿದವರು
ಬರೀ ನೆನಪುಗಳ ಲೋಕದಲ್ಲಿ

ಆಗಸದಗಲ
ಬಿದ್ದ ಬದುಕು
ಕಣ್ಣು ಹಾಯಿಸಿದತ್ತ ದಾರಿ
ಗಮ್ಯವರಿಯದ ಪಾಡು
ಗಮನಿಸಲರಿಯದ ಭಾವ
ಗುರುವು ಬೇಕು
ಸಂಗಾತಿ ಬೇಕು
ಗುರಿಯೆಡೆಗೆ ಸಾಗಲು....

ನಿರೀಕ್ಷೆ

ಸುಮ್ಮನೇ
ಅತ್ತಿತ್ತ ಚಲಿಸುವ
ನಯನಗಳು
ಕಾಣುವ ನೋಟ
ಮನದಲ್ಲಿ ಮೂಡದು
ಮನದಲ್ಲಿಯ ಚಿತ್ರಣ
ನೋಟದಲ್ಲಿ ಕಾಣದು
ಅವಳು
ಅಲ್ಲಿ ಇಲ್ಲವೆಂಬುದು
ಅರಿತೂ
ಮತ್ತೆ ಮತ್ತೆ ಇಣುಕಿ
ನೋಡುವ ನಯನಗಳು

ಮನದಲ್ಲಿ ಮಂಥನ
ಅವಳೊಡನೆ ಒಡನಾಟ
ಎಲ್ಲವನೂ ಅರಿತ
ಮನಸುಗಳು
ಅರ್ಥವಿಲ್ಲದ ಮಾತುಗಳು
ಆಗಾಗ ಮುಂಗುರುಳ
ಸರಿಸುವ
ಅವಳ ಕೈಬೆರಳು
ಕಣ್ಣೆದುರು ಅವಳಿಲ್ಲವಲ್ಲ
ಅಂತರಾಳದ ಚಿತ್ರಕೆ
ಅಳಿವಿಲ್ಲವಲ್ಲ

ಮನದಲ್ಲೇ
ಮುದಗೊಳಿಸುವ
ಅವಳ ಸುಳಿದಾಟದ
ಭ್ರಮೆಯ ಕಂಪು
ಕನವರಿಕೆಯಲ್ಲಿಯೂ
ಕೇಳುತ್ತಿರುವ
ಅವಳ ಕಾಲ್ಗೆಜ್ಜೆ,
ಕೈಬಳೆಗಳ ಸದ್ದು
ಕಣ್ಣೆದುರು ಇರದಿದ್ದರೇನಂತೆ
ಅಳಿಯಲಾರದು
ಅಂತರಂಗದ ಮಂಥನ.....

Saturday, April 7, 2012

ಸಖೀಗೀತ

ಸಖೀ....
ಕಣ್ಣ ಮುಂದೆ
ನೀನು ಕುಳಿತಿದ್ದರೂ
ಏನೋ ಕಳೆದುಕೊಂಡ ಭಾವ

ನೂರು ಮಾತುಗಳ
ಹೇಳುತಲಿದ್ದರೂ
ಮನದಲ್ಲಿ ಏನೋ
ಉಳಿದಿರುವ ಭಾವ

ನಿನ್ನ ಚಂಚಲ
ನಯನದಲಿ ತೂರಿ
ಹೃದಯದಾಳಕ್ಕಿಳಿದು
ಇರುವದೆಲ್ಲವನೂ ಹೇಳುವಾ ಬಯಕೆ

ಏನು ಕೊರತೆ
ಆವ ಬಯಕೆ ಅರಿಯಲಾರೆ ನಾ
ಲೀನವಾಗಬೇಕು ನಿನ್ನೊಳಗೆ
ನಾ ಕಳೆದು ಹೋಗಬೇಕು

ಮನದಲೇನೋ ಕಳವಳ
ಮಾಯಾಮೃಗದಂತೆ ಕಳೆದು
ಹೋದೀಯಾ ನೀನು ಎಂಬ ಭಾವ
ಬಾರೇ ಗೆಳತಿ, ಬಾರೇ
ಸೇರಿಕೋ ನೀ ಎನ್ನೆದೆಯ ಗೂಡ.......

ಪ್ರಸವ

ಪ್ರಕೃತಿ ನಳನಳಿಸಲು
ಕಾಲ ಬೇಕು, ಕಾಯ ಬೇಕು
ಪುರುಷನೋ
ಸದಾಕಾಲ ಸ್ರವಿಸುವವನು

ಮನೋರತಿಯಲ್ಲಿ
ನಮ್ಮಿಬ್ಬರ ಸಮಾಗಮ
ಅವಳು ಸ್ರವಿಸುವವರೆಗೆ
ನಾನೇನೂ ಸೃಷ್ಟಿಸಲಾರೆ

ಭಾವನೆಗಳ ಬೀಜವೆರಚಲು
ಅನುಗಾಲ ಸಿದ್ಧ ನಾನು
ಭೂಮಿ ಬೇಕು ಮೊಳಕೆಯೊಡೆಯಲು
ಭಾವಗಳು ಪದಗಳಾಗಲು

ಭಾವ ಬೀಜ ಎರಚುವ
ಕ್ಷಣವೇ ಬೇಕು ಅವಳ ಸಮಾಗಮ
ಏಕಕಾಲದ ನಾವಿಬ್ಬರೂ ಸ್ರವಿಸಿದರೇ
ಪ್ರಸವವೇದನೆ ಅವಳಿಗೆ
ಸೃಷ್ಟಿಯಾಗುವುದೊಂದು ಭಾವಬಿಂದು.....

ಸಖೀಗೀತ

ಸಖೀ....
ನಿನ್ನ ಕಂಗಳಲಿ
ನೋಡುತಿದ್ದರೇ
ಭಾವ ಲೋಕದಲಿ
ಕಳೆದು ಹೋಗುವೆ ನಾನು

ಮನದಾಳದಲಿ ಮೂಡುವ
ನೂರು ಭಾವಗಳ ಪೋಣಿಸಿ
ಅಲ್ಲೊಂದು ಇಲ್ಲೊಂದು
ಪದಗಳನು ಜೋಡಿಸಿ
ಕವಿತೆಯನು ಬರೆಯುವೆ ನಾ....

ಮಂದಗಮನೆಯಾಗಿ ಬರುವ
ನಲ್ಲೆಯಾ ಸೊಗಸದು
ಮಲ್ಲಿಗೆನೂ ಮೀರಿಸಿದೆ
ಮಂದಹಾಸವು ಅರಳಿದೆ
ಪರಿಮಳದ ತೆರದಿ

ಬಾಡದಿರಲೆಂದೂ
ನೀ ಮುಡಿದ ಮಲ್ಲಿಗೆ
ಮುಸುಕಾಗದಿರಲೀ
ನಿನ್ನ ಮುಗುಳ್ನಗೆ.......

ಸಖೀಗೀತ

ಮನದಾಳದಲ್ಲಿ
ಮೌನವೇ
ಹಾಸಿ-ಹೊದ್ದು ಮಲಗಿದೆ

ಹಾಯ್, ಹಲೋ, ಹೇಗಿದ್ದೀರಿ
ಬಾಯಿಮಾತುಗಳೆಲ್ಲ
ಕಾಟಾಚಾರ ಕಳೆಯುತ್ತಿವೆ

ಮುಖದಲ್ಲಿ
ಮೂಡಿರುವ ಮಂದಹಾಸ
ಕುಂದಿಲ್ಲದಂತೆ ಬೆಳಗುತ್ತಿದೆ

ಮುಗುಳ್ನಗುವಿನ ಕೊಂಕು ಅರಸಿ
ಅಂತರಾಳದಿ
ಇಣುಕಿ ನೋಡಲು ಅವಳಿಲ್ಲ

ಕಂಗಳು ಅರಸುತ್ತಿವೆ
ಅವರಿವರ ನೆರಳಿನಲ್ಲಿ
ಅವಳ ಪ್ರತಿಬಿಂಬವನು

ನೆನಪಿನಂಗಳದಿ
ಅವಳು ಇರುವುದೇನೋ
ಸಮಾಧಾನ......

ಹಾಗೇ ಸುಮ್ಮನೇ.....

ಅದು ಹಾಗೆಯೇ...
ಮನದೊಳಗೆ ಅಡಗಿರುವ
ಅವಳ ಪ್ರತಿಬಿಂಬ
ಕಣ್ಮುಂದೆ ಕಾಣಲು
ಬಯಸಿ
ಕಾದು ಕುಳಿತಿದ್ದಷ್ಟೇ ಬಂತು
ಬರಲಿಲ್ಲ ಅವಳು

ಅತ್ತಿತ್ತ ಸುತ್ತಮುತ್ತ
ಸುಳಿದಾಡಿದರೂ
ನನ್ನತ್ತ ಬರಲಾರದೇ
ತೊಳಲಾಡುವ ಅವಳು
ಅವಳು ಬರದಿದ್ದರೂ
ನಿರೀಕ್ಷೆಯಲಿ
ಪ್ರತಿ ಕ್ಷಣವನ್ನೂ
ಯುಗಗಳಾಗಿಸುವ
ನನ್ನ ಪರಿಪಾಟ....

ಅದು ಹಾಗೆಯೇ
ಯುಗಾಂತರದಿಂದ
ನಡೆದು ಬಂದಿದೆ
ಕಾಲವನು ಕರಗಿಸುತ್ತಾ
ಅವಳಿಗಾಗಿ
ಕಾಯುತ್ತ ಕುಳಿತಾಗ
ಅವಳೆಂದಿಗೂ ಬರುವದಿಲ್ಲ
ಅವಳ ನೆನಪುಗಳು
ತೊಲಗೆಂದರೂ
ಮನದಾಳದಿಂದ ಕರಗುವದಿಲ್ಲ....

ಸಖೀಗೀತ

ಸಖೀ....
ಏನು ಬೇಕು
ಏಕೆ ಮಾತಾಡಬೇಕು
ಯಾವುದಕ್ಕೂ
ಉತ್ತರವಿಲ್ಲ ಎನ್ನಲಿ
ಸ್ವಚ್ಛಂದ ಆಗಸದ ತೆರದಿ
ಅಂತರಾಳ
ಬರಿದೋ ಬರಿದು

ಹೇಳಲೇ ಬೇಕು
ಎಂಬ ತುಡಿತ
ಗಂಟಲಿನಾಳದಲ್ಲಿ
ಸಿಲುಕಿದ ಮಾತುಗಳು
ಮನದಲ್ಲಿ ಅಲೆ-ಅಲೆಯಾಗಿ
ಮರುಕಳಿಸುತ್ತಿರುವ
ಭಾವಬಿಂದುಗಳಿಗೆ
ಪದಗಳು ಸಿಗುತಿಲ್ಲ

ನೀನು ಎದುರಾದರೆ
ಕಣ್ಣುಗಳಲ್ಲಿ
ಬರೀ ಯಾಚನೆ
ನೀನು ಮರೆಯಾದರೇ
ಶೂನ್ಯದತ್ತ ನೋಟ
ಕಣ್ನುಚ್ಚಿ ಕುಳಿತಾಗ
ಕಾಣುವ ಚಂದ್ರಬಿಂಬ
ಅದೊಂದೇ ಸಮಾಧಾನ..... :)

ಪ್ರಕೃತಿ

ಬೆಟ್ಟದ ಮೇಲೆ
ಕಿರೀಟ ತುರಾಯಿಯಂತೆ
ಸಾಲು ಸಾಲು
ಮರಗಳ ತೋಪು
ಮುಂಜಾನೆ, ಮಧ್ಯಾಹ್ನ
ಸಂಜೆ ಹೊತ್ತಿನಲ್ಲಿ
ಸೂರ್ಯರಶ್ಮಿಯು
ಗಿಡ-ಮರಗಳ ರೆಂಬೆಕೊಂಬೆಗಳು
ದಟ್ಟಹಸಿರಿನ ನಡುವೆ
ತೂರಿ ಬುರುವಾಗ
ಮೂಡುವ ಸಪ್ತವರ್ಣದ ಚಿತ್ರ

ಅವರು ಬಂದರು
ಮೊದ-ಮೊದಲು
ಅಲ್ಲಲ್ಲಿ ಮುರಿದು ಬಿದ್ದ
ರೆಂಬೆ-ಕೊಂಬೆಗಳ ಎತ್ತಿಕೊಂಡರು
ಅವರಿವರ ಮನೆಯ ಪಡಸಾಲೆಯಲ್ಲಿ
ಕುರ್ಚಿ-ಮಂಚಗಳು
ಮೋಜು ಮಾಡಲು ಮೇಜವಾನಿಗಳು
ಅಲಂಕರಿಸಿದವು
ಉಳಿದ ತುಂಡುಗಳೆಲ್ಲ
ಅನ್ನ ಬೇಯಿಸಲು ಬೂದಿಯಾದವು

ಮತ್ತೊಬ್ಬರು
ಬೆಟ್ಟದ ಮೇಲೆ ಇರುವ
ದೇವಳಕೆ ಸಾಗುವ ಕಾಲು ದಾರಿಯಲ್ಲಿ
ನೆರಳಾಗಿದ್ದ ಮರಗಳನು
ಟಾರು ರಸ್ತೆಯನು ಮಾಡಲು
ಭಕ್ತಿಯಿಂದ ಕತ್ತರಿಸಿದರು
ಕೆಲಕಾಲ ಹಕ್ಕಿಪಿಕ್ಕಿಗಳೆಲ್ಲ
ಮೌನವಾಗಿ ರೋದಿಸಿದವು
ಮತ್ತೆ ಮಾನವನ ಆಕ್ರಮಣಕೆ
ಭಯಬಿದ್ದು ಬೇರೆ ನೆಲೆ
ಅರಸುತ್ತ ಮರೆಯಾದವು

ಬೆಟ್ಟದ ದೇವರ ಮಹಿಯೆನು
ಸಾರಲೊಬ್ಬ ಪೂಜಾರಿ
ತನಗೊಂದು ಗೂಡು ಮಾಡಲು
ಬೋಳಿಸಿದ ಕೆಲವು ಮರಗಳನು
ಮಂತ್ರಿ-ಮಹೋದಯರು
ಭಟ್ಟಂಗಿಗಳ ಮಾತು ಕೇಳಿ
ಮಾಡಿದರು
ಚಂಡಿಕಾ ಹೋಮ
ಮರಗಳೆಲ್ಲವೂ ಆಹುತಿಯಾದವು
ಬಯಲಾಯಿತು ಬೆಟ್ಟ
ಪುಣ್ಯ ಕ್ಷೇತ್ರವನು ಜಗಕೆಲ್ಲ
ತೋರಿಸಲು ಸಾರಿದರು ಕೋಟಿ-ಕೋಟಿ

ದರಕಾರವಿಲ್ಲದ ಸರಕಾರಿ ಕೆಲಸ
ಕಾಮಗಾರಿಯಲಿ
ಎಲ್ಲೋ ಕೇಳಿದ ಟಣ್-ಟಣ್ ಸದ್ದು
ಮಂತ್ರಿಮಹೋದಯರ
ಚಮಚಾಗಳಿಗೆ ಗಣಿಗಾರಿಕೆಯ ಹಸಿವು
ಬೆತ್ತಲಾದ ಬೆಟ್ಟದಾ
ಬುಡಕ್ಕೇ ಗುದ್ದಲಿ-ಸಲಿಕೆ
ಪಿಕಾಸುಗಳ ಪೂಜೆ
ಜೆಸಿಬಿ ಯಂತ್ರಗಳ ಸದ್ದು
ದೂರದಿಂದ ಕೇಳಿಸುತ್ತಿದೆ
ಪೂಜೆಯ ಘಂಟೆ
ಯಂತ್ರರಾಕ್ಷಸರ ಸದ್ದು
ಯಾರಿಗೂ ಕೇಳುತ್ತಿಲ್ಲ
ಪ್ರಕೃತಿಯ ನರಳಾಟ......

ಸಖೀಗೀತ

ಸಖೀ....
ನೀ ಎನ್ನ ಪಕ್ಕದಲ್ಲಿಯೇ
ಕುಳಿತಿದ್ದರೂ
ಎಳೆದು ಎದೆಗಪ್ಪಿಕೊಂಡು
ಎದೆಯಾಳದಲ್ಲಿ
ಹುದುಗಿಸಿಕೊಳ್ಳುವಾಸೆ ಎನಗೆ

ಅಂತರಾಳದ
ಕಣ-ಕಣದಲ್ಲಿಯೂ
ನೀನು ತುಂಬಿದ್ದರೂ
ಅರೆಕ್ಷಣವೂ ಕಾಣದಿರೆ
ಕಳೆದುಹೋದೀಯ
ಎಂಬ ಕಳವಳವು ಮನಕೆ

ಹೃದಯದಲಿ ಮಿಡಿಯುವ
ಒಂದೊಂದು ಬಡಿತವೂ
ನಿನ್ನ ಹೆಸರು ನುಡಿಯುವುದು
ನಿನ್ನುಸಿರಿನಲ್ಲಿಯೇ
ಮಿಳಿತಗೊಳ್ಳುವ ತವಕ ಮೂಡುವುದು

Thursday, March 1, 2012

ಸಖೀಗೀತ

ಸಖೀ...
ಇಂದೇಕೋ ಮತ್ತೆ
ಬರಡಾಗಿದೆ ಎನ್ನೆದೆಯ ತೋಟ
ಭಾವನೆಗಳೆಲ್ಲಾ ಖಾಲಿಯಾಗಿ
ಹೃದಯಬಡಿತವೂ ಕ್ಷೀಣವಾಗಿದೆ

ಹನಿ ನೀರಿಗಾಗಿ ಬಿರಿದ
ವಸುಂಧರೆಯಂತೆ ಕಾಯುತಿದೆ
ಆಗಸದೆಡೆಗೆ ಆಸೆಯಿಂದ
ನೋಡು ನೀ ಎನ್ನೆಡೆಗೆ
ಒಮ್ಮೆ ಪ್ರೀತಿಯಿಂದ

ನಿನ್ನ ನಸುನಗು ಅರಳಲಿ
ಎನ್ನೆದೆಯ ಮೇಲೆ....

ನೋಟ

ಎಷ್ಟು ದಿನವಾಯ್ತು ಗೆಳೆಯಾ....

ಅವಳ ಕಣ್ಣ ನೋಟದಲ್ಲಿಯೇ
ಮೂಡಿತ್ತು ಕವಿತೆಯ ಬಯಕೆ

ಸೂರ್ಯ ಚಂದ್ರರು ಮರೆಯಲಿಲ್ಲ
ಕಾಲದ ಗತಿಯ, ತಮ್ಮ ಪಥವ
ಮೋಡಗಳು ಮರೆಯಾದರೂ
ಅಂಚಿನಿಂದ ತೂರುವರು ಬೆಳಕಾ

ಘಳಿಗೆಗಳು ಕಳೆಯುತ್ತಿವೆ
ಹಗಲು-ರಾತ್ರಿ ಕಣ್ಣಿವೆಗಳನು ತೆರೆದು
ಕಾಯುತ್ತಿರುವೆ ನಿನ್ನ ಪಿಸುಮಾತಿಗೆ
ನೀನೇಕೆ ಉಲಿಯಲಾರೆ ಒಲುಮೆಯ ನುಡಿಯಾ

ನಾ ಬಲ್ಲೆ ನಿನ್ನ ಅಂತರಾಳದ ಪ್ರೀತಿ
ಆದರೂ ಮಲ್ಲಿಗೆ ಅರಳಿದಾಗಲೇ ಪರಿಮಳವು
ಅಕ್ಷರಗಳ ನಾ ನೀಡುವೆ ನಿನಗೆ
ಪ್ರೀತಿ-ಪ್ರೇಮದ ಅಕ್ಕರೆಯ ನೀ ಹರಿಸು

ಪರಶಿವನ ಮುಡಿಯಿಂದ ಹರಿದು ಬರಲಿಲ್ಲವೇ
ಭಾಗೀರಥಿ ಆ ಭಗೀರಥನ ತಪೋಬಲದಿಂದ
ಸುರಿಸು ನೀ ಪ್ರೇಮಧಾರೆ, ಹರಿಸು ಆ ಕಾವ್ಯಧಾರೆ
ನನ್ನೊಲವ ಬಲದಿಂದ, ನನ್ನೊಲವ ಬಲದಿಂದ....

ಸಂಧ್ಯಾ

ಬಾನ ತುದಿಯಿಂದ

ಜಾರುವ ಭಾಸ್ಕರನ
ಹೊಂಗಿರಣಗಳು...
ಕಾರ್ಮೋಡಗಳ ಮೇಲೆಲ್ಲಾ ಹರಡಿ
ಮೋಡದಂಚಿನಲಿ ಮೂಡಿದೆ
ಬಣ್ಣ ಬಣ್ಣದ ಚಿತ್ತಾರ

ಭಾಸ್ಕರನ ಬೆಚ್ಚನೆಯ
ಪ್ರೀತಿಯ ನೋಟವನು ಹೀರಿ
ಮೋಡಗಳ ಮೈಮನಗಳು ಪುಳಕಗೊಂಡು
ಹನಿಹನಿಯಾಗಿ ಸುರಿದಿದೆ ನೋಡಾ
ಪ್ರೇಮ ಕಾರಂಜಿ...

ಪ್ರೇಮಿಗಳ ಸಂದೇಶ
ಹೊತ್ತೊಯ್ಯುವ ಬಿಳಿಮೋಡಗಳು
ಭಾಸ್ಕರನ ಪ್ರೀತಿಗೆ ನಸುನಾಚಿ
ದೂರದಿಂದಲೇ ಮೆರೆದವು
ಅಂಚಿನಲೆಲ್ಲಾ ಕೆಂಪೇರಿ....

ದೂರ ದಿಗಂತದಲಿ
ಮತ್ತೆ ಬರುತಿರುವ ಭಾಸ್ಕರನ ಕಾಯುತ್ತ
ಅಲೆಗಳು ನಲಿದಾಡಿ ನುಲಿದಿವೆ
ಸಂತಸವ ಚಿಮ್ಮುತ್ತಾ
ವಸುಂಧರೆಯ ಒಡಲಿಗೆ.....

ನೋಟ

ಸಖೀ...

ಮೆಲ್ಲ-ಮೆಲ್ಲಗೆ
ನೀ ಬರುತಿರಲು
ಕಣ್ಣ ನೋಟಗಳು
ಸೇರಿದಾ ಕ್ಷಣ
ನಿನ್ನ ಮನದ
ಮಾತುಗಳೆಲ್ಲವೂ
ಎನ್ನ ಅಂತರಾಳಕ್ಕೆ
ತಲುಪುತ್ತವೆ....

ಆದರೂ
ನೀನು ನನ್ನೊಡನೆ
ಮಾತನಾಡುವಾಗ
ಆಲಿಸುವ ತೆರದಿ
ಕಣ್ರೆಪ್ಪೆ ಬಡಿಯದಂತೆ
ನಿನ್ನನ್ನೇ ನೋಡುತ್ತಾ
ನಿನ್ನ ಕಣ್ಣಿನಾಳದಿ
ನಾ ಕಳೆದುಹೋಗುತ್ತೇನೆ

ಸಖೀ ಗೀತ

ಸಖೀ......


ಮೆಲ್ಲ- ಮೆಲ್ಲಗೆ
ಸಂಜೆ ಕವಿಯುತಿರುವಂತೆ
ಮನದಲ್ಲೇನೋ ದುಗುಡ
ನಿರಾಶೆಯ ನಿನ್ನ ನಿರೀಕ್ಷೆಯಲ್ಲಿಯೇ
ಕವಿಯುತ್ತಿರುವ ನಿಶೆಯ ಕವಚ

ದೂರ-ದೂರ
ಬಾನಿನುದ್ದಗಲಕ್ಕೂ ಹಾರಾಡಿ
ಮರಳಿ ಗೂಡಿಗೆ ಬರುವಂತೆ
ಮತ್ತೆ-ಮತ್ತೆ
ಅಂತರಂಗದಲಿ ಮರುಕಳಿಸುತ್ತಿವೆ
ನಿನ್ನೊಡನಾಟದ ನೆನಹುಗಳು

ಆದರೂ ಬೆಳಗುತಿದೆ
ಎನ್ನ ಎದೆಯಾಳದಲ್ಲಿ
ನೀ ಹಚ್ಚಿರುವ ಪ್ರೀತಿಯ ಹಣತೆ....

ಸಖೀ ಗೀತ

ಸಖೀ...



ನೀನಿಲ್ಲ ಎನ್ನ ಬಳಿಯಲಿ
ಎಂದು ಪರಿತಪಿಸುವ
ಈ ತಾಳ ತಪ್ಪಿದ ಹೃದಯ
ಪುಳಕಗೊಳ್ಳುವುದೇಕೆ !!!
ನಿನ್ನ ನೆನಪಲಿ

ಅರಿವಿಲ್ಲದಂತೆ ನಸುನಗು
ಮೂಡುವುದೇಕೆ
ನಲ್ಲನ ಮೊಗದಲಿ

ವಿರಹದ ಬಿಸಿಯುಸಿರಿನಲ್ಲಿಯೂ
ತಂಪೆರೆಯುವುದೇಕೆ
ನಿನ್ನ ಸವಿನೆನಪು !!!

ಏಕಾಂತದಲ್ಲಿಯೂ
ಕಾಡುವುದೇಕೆ
ಆ ನಿನ್ನ ಪಿಸುಮಾತು !!!

ಕಣ್ಣು ಮುಚ್ಚಿದರೂ
ಕಾಣುವುದೇಕೆ ಎನ್ನ
ಚಂದ್ರಿಕೆಯ ಬಿಂಬ....

ಏಕೆ ????
ಹೀಗೇಕೆ ಹೇಳು ಸಖೀ..... :)

ವಿರಹ

ಸಖೀ.....

ವಿರಹದ ಉರಿಯಲ್ಲಿ
ಬೇಯಬೇಡ
ನಲ್ಲನಿಹನು ನಿನ್ನ
ಹೃದಯದೊಳಗೆ

ಕನ್ನಡಿಯೊಳಗೆ
ನೋಡಿಕೋ ನಿನ್ನ
ಮೊಗವನೊಮ್ಮೆ
ಅಲ್ಲಿಯೂ
ಕಾಣುವೆ ನಾನು

ನಿನ್ನ ಕಣ್ಣಾಲಿಗಳಿಂದ
ಜಾರಿ ಬೀಳದಿರಲಿ
ಅಗಲಿಕೆಯ ಕಂಬನಿ
ಸೋರಿದರೆ...
ಧರೆ ಸೇರಿಯೇನು ನಾನು... :)

Friday, February 24, 2012

ದೀವಿಗೆ

ಸಾಗುವುದೇ ಜೀವನ
ನಿಲ್ಲದು ಕಾಲನ ಗಣನೆ
ಕವಲು ದಾರಿಯಲಿ ಮುನ್ನಡೆಯಲು

ದಾರಿ ತೋರುವ ದೀವಿಗೆಯು ಬೇಕು
ಬದುಕಿನ ಬವಣೆಯಲಿ ಕಂಗೆಟ್ಟು ನಿಂತಾಗ

ಬೆಳಕು ಚೆಲ್ಲಿ ಮುನ್ನಡೆಸುವ ಮನಸು ಬೇಕು


ಕುರುಡ ಕಂದೀಲು ಹಿಡಿದು
ಸಾಗುವುದು ದಾರಿ ಅರಿಯಲಲ್ಲ
ದಾರಿಹೋಕರು ಹಾಯದಂತಿರಲು
ಕಣ್ಣು ತೆರೆಸುವುದು ನಮಗೆ
ಕುರುಡನಾ ಕಂದೀಲು
ಮುಂದೆ ಸಾಗುವ ಮುನ್ನ.....

Thursday, January 19, 2012

ಸಖೀ ಗೀತ

ಸಖೀ....

ಕಾಲಾತೀತವಾದ
ದಾಹವನು
ಆಪೋಶನಗೊಳಿಸಿಕೊಂಡು
ಹನಿ ಪ್ರೀತಿಗೆ ಬಾಯ್ದೆರೆದು
ಕಾದು ಕುಳಿತಿರುವ
ಎನ್ನ ಹೃದಯಕೆ
ಪ್ರೇಮ ಸಿಂಚನಗೈದು
ನೀನು ಎರಚಿದ
ಆ ಪ್ರೇಮ ಬೀಜ
ಮೊಳಕೆಯೊಡೆದು, ಬಳ್ಳಿಯಾಗಿ
ಅಂತರಾಳದಲಿ ಹಸಿರಾಗಿ
ಎನ್ನ ಜೀವನದ
ಜೀವನಾಡಿಯಾಗಿ
ಚಿಗುರೊಡೆದು, ಮುಡಿಯಲೊಂದು
ಹೂವ ಅರಳಿಸಿ ನಲಿಯುತಿದೆ......

ಸಖೀ ಗೀತ

ಸಖೀ....

ಹಣತೆಯಾಗುವಾಸೆ ಎನಗೆ
ನಿನ್ನ ಹೃಯಮಂದಿರದ
ಮೂಲೆಯಲ್ಲಿ ಕುಳಿತು
ಪ್ರೀತಿಯ ಬೆಳಕ ಚೆಲ್ಲುವಾಸೆ

ಎನ್ನ ಜೀವನವನ್ನೇ
ಬತ್ತಿಯಾಗಿ ಹೊಸೆದು
ನಿನ್ನ ಅಂತರಂಗಲಿ ಪ್ರತಿಫಲಿಸುವ
ಪ್ರೀತಿಯ ಎಣ್ಣೆಯನು ಮಿಂದು
ಜೀವನದಿ ಬಾಳು ಬೆಳಗುವಾಸೆ... :)

ಸಖೀ ಗೀತ

ಸಖೀ....

ಹೀಗೆ ಮುನಿಸಿಕೊಂಡು
ಹೋಗದಿರು
ನಿನ್ನ ಹಿಂದೆಯೇ ಬರುತಿದೆ
ಎನ್ನ ಹೃದಯವೂ


ನಿನ್ನ ಅಗಲಿಕೆಯ
ಭಾವವ ಧರಿಸಿ
ಪೇಲವಗೊಂಡ ಮುಖದಲ್ಲಿ
ಹನಿಜೀವ ಹಿಡಿದು
ನೋಡುತ್ತಿರುವ ಕಂಗಳಲಿ
ಕಣ್ಣಿಟ್ಟು ನೋಡು

ಹೋಗದಿರು ಸಖೀ
ಮರಳಿ ಬಾ ಎನ್ನೆಡೆಗೆ
ವಿರಹದುರಿಯಿಂದ ಬೆಂದು
ಬಸವಳಿದಿಹ ಹೃದಯಕೆ
ನಿನ್ನ ಪ್ರೇಮಾಮೃತವ ಬಡಿಸು.....

ಸಖೀ ಗೀತ

ಸಖೀ....

ಹೊನ್ನವರ್ಣದ ದ್ರಾಕ್ಷಿ
ಗೊಂಚಲಿನಂತೆ ಕಾಣುವ
ನಿನ್ನ ಕಾಲ್ಬೆರಳುಗಳು
ಹೆಜ್ಜೆ-ಹೆಜ್ಜೆಗೂ
ನುಲಿವ ಗೆಜ್ಜೆಗಳ ಹೊತ್ತು
ತಿರುಗುವ
ಆ ಪುಟ್ಟ ಪಾದಗಳು
ಅತ್ತಿತ್ತ ಸುಳಿದಾಡುವಾಗ
ಎನ್ನೆದೆಯಲ್ಲಿ ಕೋಲಾಹಲ
ಪಂಚಮ ಮಿಡಿಯುವುದು
ಹೃದಯ ವೀಣೆಯಲಿ

ಮಾತಾಡಲು
ಬಾಯ್ದೆರೆಯುವ ಮುನ್ನ
ಎಲ್ಲವನೂ ಹೇಳಿಬಿಡುವ
ಆ ನಿನ್ನ ಕಣ್ಣುಗಳು
ಎನ್ನ ಸನಿಹದಲಿ
ಕುಳಿತುಬಿಡು ಸಾಕು
ಮೌನಗೀತೆ ಮೊಳಗುವುದು
ಅಂತರಾಳದಿಂದ.... :)