Saturday, October 3, 2015

ಏನೋ ತೋಚಿದ್ದು

ಈಗೀಗ
ನನಗರಿವಿಲ್ಲದಂತೆ
ಪ್ರವಾದಿಯೊಬ್ಬ
ನನ್ನಂತರಾಳದಲಿ
ಅವತರಿಸುತ್ತಾನೆ

ನನ್ನಂತರಂಗದ ಕೊಳೆ
ಕಳೆದುಬಿಡುವನೆಂದು
ನನಗೂ ಒಂಥರಾ ಖುಷಿಯೇ
ಆದರೇ....
ಅವನೋ ಆಗಾಗ
ರಾಜಕಾರಣಿಯಂತೆ
ಕಾರಣವಿಲ್ಲದೇ
ಬೊಗಳೆ ಬಿಡುತ್ತಾನೆ

ಹಿಂದೊಮ್ಮೆ ಓದಿರುವ
ಅವರಿವರಲ್ಲಿ ಕೇಳಿರುವ
ಸದ್ವಿಚಾರಗಳ ತುತ್ತೂರಿಯನ್ನು
ಒಂದಿನಿತು
ಜೋರಾಗಿಯೇ ಊದುತ್ತಾನೆ
ನನ್ನೊಳಗೆ
ಬಿತ್ತಿ ಬೆಳೆಸಬೇಕಾಗಿರುವ
ವಿಚಾರಗಳನೆಲ್ಲ
ಅವನು
ಅಲ್ಲಲ್ಲಿ ಎರಚಲು
ಹೊಂಚುಹಾಕುತ್ತಾನೆ

ನನಗೋ
ತೆರೆದುಕೊಳ್ಳುವ ಹಂಬಲ
ಪಾಚಿಗಟ್ಟಿದ ಕೊಳೆಯನ್ನು
ತೊಳೆದುಕೊಳ್ಳುವ ಹಂಬಲ
ಆದರೇನು
ಅವನು ಎನ್ನ ಬಾಯಿಗೆ
ಕೆಲಸಕೊಟ್ಟು
ಕಣ್ಣು, ಕಿವಿಯನ್ನು ಮುಚ್ಚಿದ್ದಾನೆ
ಎನ್ನೊಳಗಿನ ದುರ್ಘಂಧವನು
ಸಹಿಸದೇ
ಅವನು ಈಗೀಗ
ಮೂಗು ಮುಚ್ಚಿಕೊಂಡು
ಹಗಲಿರುಳೂ
ಪ್ರವಚನ ನೀಡುತ್ತಿದ್ದಾನೆ.......

ನನ್ನತನಕ್ಕೆ ತೆಳುವಾದ
ತೆರೆಯೆಳೆದು
ಅಂತರಾಳದಿ ಅವತರಿಸಿದ ಪ್ರವಾದಿ
ಜಗವ ಬೆಳಗುವ
ಹುಂಬತನದ ಹಂಬಲ ಮೆರೆಯುತ್ತಿದ್ದಾನೆ....

Saturday, August 15, 2015

ಕನವರಿಕೆ

ಸುಮ್ಮನೇ
ಅತ್ತಿತ್ತ ಚಲಿಸುವ
ನಯನಗಳು
ಕಾಣುವ ನೋಟ
ಮನದಲ್ಲಿ ಮೂಡದು
ಮನದಲ್ಲಿಯ ಚಿತ್ರಣ
ನೋಟದಲ್ಲಿ ಕಾಣದು
ಅವಳು
ಅಲ್ಲಿ ಇಲ್ಲವೆಂಬುದು
ಅರಿತೂ
ಮತ್ತೆ ಮತ್ತೆ ಇಣುಕಿ
ನೋಡುವ ನಯನಗಳು

ಮನದಲ್ಲಿ ಮಂಥನ
ಅವಳೊಡನೆ ಒಡನಾಟ
ಎಲ್ಲವನೂ ಅರಿತ
ಮನಸುಗಳು
ಅರ್ಥವಿಲ್ಲದ ಮಾತುಗಳು
ಆಗಾಗ ಮುಂಗುರುಳ
ಸರಿಸುವ
ಅವಳ ಕೈಬೆರಳು
ಕಣ್ಣೆದುರು ಅವಳಿಲ್ಲವಲ್ಲ
ಅಂತರಾಳದ ಚಿತ್ರಕೆ
ಅಳಿವಿಲ್ಲವಲ್ಲ

ಮನದಲ್ಲೇ
ಮುದಗೊಳಿಸುವ
ಅವಳ ಸುಳಿದಾಟದ
ಭ್ರಮೆಯ ಕಂಪು
ಕನವರಿಕೆಯಲ್ಲಿಯೂ
ಕೇಳುತ್ತಿರುವ
ಅವಳ ಕಾಲ್ಗೆಜ್ಜೆ,
ಕೈಬಳೆಗಳ ಸದ್ದು
ಕಣ್ಣೆದುರು ಇರದಿದ್ದರೇನಂತೆ
ಅಳಿಯಲಾರದು
ಅಂತರಂಗದ ಮಂಥನ

ನಿರೀಕ್ಷೆ

ಸಖೀ...
ನಾನು ನಿರೀಕ್ಷಿಸುತ್ತಿದ್ದೇನೆ
ನಮ್ಮಿಬ್ಬರ ಮಿಲನವನ್ನು
ಬರಗೆಟ್ಟವನಂತೆ ಕಾಯುತ್ತಿದ್ದೇನೆ
ನಿನ್ನ ಬರವನ್ನು....

ಮನಸು ಕಲ್ಲಾಗಿಸಿ
ನಮ್ಮ ಪ್ರೀತಿಗೆ ಕವಚ ತೊಡಿಸಿ
ಕಾಯುತ್ತಿದ್ದೇನೆ ನಾನು
ಶಾಪಗ್ರಸ್ಥ ಅಹಲ್ಯೆಯಂತೆ....

ನಿನ್ನೊಂದಿಗೆ ಕಳೆದಿರುವ ಕ್ಷಣಗಳ
ಸವಿನೆನಪುಗಳಲಿ ಲೀನವಾಗಿ
ಕಾಯುತ್ತಿದ್ದೇನೆ ನಾನು
ಅಶೋಕವನದ ಸೀತೆಯಂತೆ....

ಕಾಲಚಕ್ರದಡಿ ಹಣ್ಣಾಗಿ
ನನ್ನತನ ಕ್ಷಣ-ಕ್ಷಣವೂ ಕರಗಿಹೋಗಿ
ಹೃನ್ಮಗಳಲಿ ನಿನ್ನನ್ನೇ ಹೊತ್ತು
ಕಾಯುತ್ತಿದ್ದೇನೆ ನಾನು ಶಬರಿಯಂತೆ....

ಸಖೀ....
ನಿನ್ನನ್ನು ನನ್ನೊಳಗೇ ಅವಿತಿಟ್ಟುಕೊಂಡು
ಕಳೆದುಹೋಗಿರುವ ನನ್ನನು
ನಿನ್ನ ಕಣ್ಣಾಲಿಗಳಲಿ ಕಾಣಲು
ನಾನು ಕಾಯುತ್ತಿದ್ದೇನೆ ನಿನಗಾಗಿ...

ವಿದಾಯ

ಸಖೀ....
ಒಲುಮೆಯಾ
ಮಿಲನವೊಂದು ಮುಗಿದು
ಪ್ರತಿಬಾರಿ ನೀನು
ನಿರ್ಗಮಿಸಿದಾಗಲೂ
ಶೂನ್ಯದತ್ತಲೇ
ಎನ್ನ ಗಮನ...

"ಏನಾಯ್ತು, ಹೀಗೇಕೆ"
ಎಲ್ಲರಾ ಕಳವಳದ ಮಾತು
ಗಾಯವಿಲ್ಲಾ
ನೋವಿನಾ ಗುರುತಿಲ್ಲಾ
ಪೇಲವ ನಗೆಯೊಂದೇ
ಎನ್ನ ಉತ್ತರಾ....

ಪ್ರತಿ ಇರುಳಿನ
ಎನ್ನ ಏಕಾಂತದಲಿ
ಎಲ್ಲಿಹಳು ಎನ್ನವಳು
ಎಂಬ ಪ್ರಶ್ನೆಯೊಡನೆ
ಮನದ ಭಿತ್ತಿಯಲಿ
ಮೂಡುವಾ ನಿನ್ನ ಪ್ರತಿಬಿಂಬ...

ವಿದಾಯದೊಂದಿಗೆ
ಕೊನೆಗೊಳ್ಳುವಾ
ನಮ್ಮ ಮಿಲನಗಳು....
ಪುನರ್ಮಿಲಕೆ
ಮುನ್ನುಡಿಯಾಗಲಿ
ನಮ್ಮ ವಿದಾಯಗಳು....

ಆತ್ಮಸಾಕ್ಷಿ


ಶ್ !!!
ಸ್ವಲ್ಪ ಸಹನೆಯಿಂದಿರಿ
ನಾಲ್ಕಾರು ನಿಮಿಷ
ಮೌನವಾಗಿ
ನಿಮ್ಮೊಳಗೆ ಅಡಗಿರುವ
ನಿಮ್ಮ ಆತ್ಮ
ಉಲಿವುದನೂ ಕೇಳಿ

ಬೋಧಿಸುವುದ ನಿಲ್ಲಿಸಿ
ಮರುಳು ಮಾಡುವ
ವಾಗ್ಬಾಣಗಳಿಗೆ ವಿರಾಮ ನೀಡಿ
ಪಾಂಡಿತ್ಯ, ಬಿರುದುಗಳ
ಕಳಚಿ
ನಿಮ್ಮತನದ ಪ್ರತಿಬಿಂಬ ನೋಡಿ

ಎಡ-ಬಲಗಳ ಮೀರಿ
ಹಾಡುಹಗಲೇ ಇರುಳನ್ನು ಹೊದ್ದ
ನೊಂದವರ
ಒಂದರೆಕ್ಷಣ ನೋಡಿ
ಅವರ ಬಾಳಿಕೆ ಬೆಳಕು ನೀಡಿ
ಇಲ್ಲವಾರದೇ
ಪಕ್ಕಕ್ಕೆ ಸರಿದು ಅವರನ್ನು ಸಾಗಲು ಬಿಡಿ

ದಯವಿಲ್ಲದ ನಿಮ್ಮ
ಧಾರ್ಮಿಕತೆಯ ಕತೆಗಳ
ಮೂಲೆಗಿಡಿ ಗಂಟು-ಮೂಟೆ ಕಟ್ಟಿ
ಹಸಿದವರ ಮುಂದೆ
ಉಲಿಯುವಾ ನಿಮ್ಮ ಪ್ರವಚನಕೆ
ಒಂದಿನಿತು ವಿರಾಮ ನೀಡಿ
ಹಸಿವು ತಣಿಸಬಹುದಾದರೂ
ಕಾಮಾಲೆ ಕಣ್ಣುಗಳ
ಪೊರೆಯ ಹರಿದು ಹಾಕಿ

ಶ್ !!!
ಸ್ವಲ್ಪ ಮೌನವಹಿಸಿ
ವಾಗ್ವಾದಗಳ ನಡುವೆ
ನಿಮ್ಮ ಗಮನಕ್ಕೆ ಬಾರದೇ
ಕೊನೆಯುಸಿರೆಳೆದ ಆತ್ಮಗಳಿಗೆ
ಚಿರಶಾಂತಿ ಕೋರಿ
ಅರೆ ನಿಮಿಷ ಕಣ್ಣು ಮುಚ್ಚಿ
ನಿಮ್ಮ ಪ್ರತಿಬಿಂಬವ
ನೀವೇ ನೋಡಿ.......

ವಿರಹಗಾನ

ವಿರಹಾ.....
ಶೀತಲ ಸಮರ
ಮಂಜುಗಟ್ಟಿದೆ ಮನಸು
ಬಿಸಿಯುಸಿರಲಿ ಬೆಸೆದು
ಕರಗಿಸಬೇಕು...

ಒಬ್ಬರಿಂದೊಬ್ಬರು
ವಿಮುಖರಾಗಿದ್ದರೂ
ಚಿತ್ತವೆಲ್ಲವೂ ತುಂಬಿದೆ
ಮನೋರಮೆಯ ಚಿತ್ರ...

ತೊರೆಯ ದಡಗಳ ಆಚೆ
ಸಂತ್ರಸ್ತ ಪ್ರೇಮದ ತುಣುಕುಗಳು
ತೆರೆ ಕರಗಿ ಒಂದಾಗಲು
ಬೇಕಿದೆ ನೀಳ ಬೆರಳುಗಳ ಸ್ಪರ್ಷ...

ಒಂದಿನಿತು ವಿರಹಾ
ಅದುವೇ ತರಹ ತರಹಾ
ನಿಟ್ಟುಸಿರಿನ ಬೇಗೆ
ಕರಗುತಿದೆ ಮಂಜಿನಾ ತೆರೆ.....

ಉಚ್ವಾಸ-ನಿಸ್ವಾಸ
ನಮ್ಮುಸಿರು ಪ್ರೀತಿಯೇ
ಮನದ ಮಾಲಿನ್ಯ ಕರಗಿ
ಮಾನಿನಿಯ ನೋಟದಲಿ ಲೀನವಾಗಬೇಕು...

ಲಹರಿ.....

ಅಂತರಾಳದ
ಬಿಂದುವಿನೊಳಗೆ
ಉದ್ಭವವಾದ ಭಾವಕಣ
ಸಮತೋಲಿತ ವಿಚಾರವಿದ್ದವಿಗೆ
ಬೆಳೆಯುತ್ತಾ, ಬೆಳೆಯುತ್ತಾ
ನಿಯಂತ್ರಣ ಮೀರಿ
ಬಿಂದುವಿಗೆ-ಬಿಂದುಗಳು ಸೇರಿಕೊಂದು
ರೇಖೆಯಾಗಿ...

ಒಂದೊಮ್ಮೆ ಸರಳವಾಗಿ ಮತ್ತೊಮ್ಮೆ
ವಕ್ರವಾಗಿ
ಒಂದಿನಿತು ಅಂತರವನಿತ್ತು
ಅಕ್ಷರಗಳಾಗಿ ಒಲಿದು
ಒಮ್ಮೊಮ್ಮೆ ನಿರಂತರವಾಗಿ ಹರಿದಾಡಿ...
ಚಿತ್ರಕಾರನಿಗೆ ಕಲಾಕೃತಿಯಾಗಿ
ನಾಟ್ಯರಾಣಿಗೆ
ನಿರ್ವಾತದಲಿ ಚಲಿಸುವಾ ಸಂಜ್ಞೆಯಾಗಿ
ಕೈ-ಕಾಲುಗಳೊಡಗೂಡಿ ಚಲಿಸುವಾ
ನಾಟ್ಯವಾಗಿ...
ಸೃಜನಶೀಲ ಸಾಹಿತಿಗೆ ಕಲೆಯಾಗಿ ಒಲಿದಿತ್ತು
ಗೊತ್ತು-ಗುರಿಯಿಲ್ಲದವನ
ಮನವೆಂಬ ಪರದೆಯಲಿ ಕಪ್ಪು-ಕಪ್ಪಾಗಿ
ಮತಿಗೇ ಗ್ರಹಣ ಹಿಡಿದಿತ್ತು...

Friday, April 17, 2015

ನಿಲ್ದಾಣ

ಅವರಿವರು
ಬರುವುದೂ-ಹೋಗುವುದೂ
ಉಚ್ವಾಸ-ನಿಶ್ವಾಸದಂತೆ ನಿರಂತರವಾಗಿದೆ
ಬಂದವರು ಹೋಗಲೇಬೇಕೆನ್ನುವ
ಪ್ರಕೃತಿಯ ನಿಯಮ
ತಲತಲಾಂತರದಿಂದಲೂ ತಪ್ಪಲೇ ಇಲ್ಲಾ

ಬಂದವರು
ಹೋಗುವುದು ಶತಸಿದ್ಧವೆಂದು
ಅರಿತ ಮನಸಿಗೆ
ಬಯಸಿದ್ದನ್ನು ಹಿಡಿದಿಟ್ಟುಕೊಳ್ಳಲಾಗದ ಸಂಕೋಚ
ಪಡೆಯಲೇಬೇಕು
ಎನ್ನುವ ಹಂಬಲವೇ ಇಲ್ಲದಿರೆ
ಬರಲಾರದೇ ಇರುವುದರೆಡೆಗೆ ನಿರೀಕ್ಷೆಯೂ ಇಲ್ಲಾ

ನಿಂತಲ್ಲೇ
ಅತಳ-ಸುತಳ-ಪಾತಾಳ ಲೋಕವ
ಸುತ್ತಿ ಸಂಭ್ರಮಿಸುವ ಮನಕೆ
ಆಶ್ರವಿತ್ತು
ಬರುವುದು-ಹೋಗುವುದರ ನಡುವೆ
ಸ್ಥಾಯಿ ನಿಂತಿರುವ ತನುವಿಗೆ
ಸಂಭ್ರಮವೂ ಇಲ್ಲಾ, ಸೂತಕವೂ ಇಲ್ಲಾ

ಆದರೂ....
ಬಂದು-ಹೋಗುವವರೆಡೆಗೆ ಗಮನವಿತ್ತು
ಸುಖ, ನೆಮ್ಮದಿ, ನೋವು, ವಿರಹ ಏನೇನೋ
ಭಾವಗಳ ಧರಿಸಿ ಸರಿದ
ಮುಖಗಳು ಭಿತ್ತಿಯ ಪರದೆಯ ಮೇಲೆ
ಅಚ್ಚೊತ್ತಿರುವುದು ಅಳಿಸಲಾಗುತ್ತಿಲ್ಲಾ
ನೆನಪಿನಂಗಳದಿ ಅರಳಿರುವ ಹೂವುಗಳ
ಬಣ್ಣವೂ ಬಾಡಿಲ್ಲ
ಮುಖಗಳೋ ಮುಖವಾಡಗಳೋ ಅರಿವಿಗೂ ಬಂದಿಲ್ಲಾ.....

Saturday, March 28, 2015

ಸೇತುವೆ

ಯಾರೋ ಬಂದರು

ಇನ್ಯಾರೋ ದಾಟಿ ಹೋದರು
ಅಸಂಖ್ಯ ಜೀವಿಗಳು, ಪ್ರಾಣಿಗಳು,
ಚರಾಚರಗಳನು ಹೊತ್ತು ಸಾಗುವಾ 
ವಾಹನಗಳ
ಅಲೆದಾಟಕ್ಕೆ ನಲುಗಿ
ಶಿಥಿಲಗೊಂಡಿದೆ ಎನ್ನ ಮನ
ಆದರೂ
ಎರಡು ದಡಗಳ
ಜೋಡಿಸುವ ಹಂಬಲ ತಣಿದಿಲ್ಲ


ಹರವಿಕೊಂಡಿರುವ
ಎನ್ನ ಆಸರೆಗೆ ಒರಗಿ
ಶುಕ-ಪಿಕ ಗಿಣಿ-ಗೊವಂಕಗಳ
ನೀನಾದಲಿ
ಪಿಸುಮಾತಿನಲಿ
ಪ್ರೇಮವನುಲಿದು ಒಲಿದು
ಒಂದಾದ ಜೀವಿಗಳ ನನೆದು
ಬಲಗೊಳ್ಳುತಿದೆ 
ಜೋಡಿಸುವ ಕೊಂಡಿಯಾಗಿಯೇ 
ಇರುವ ಹಂಬಲ

ಆದರೂ.....
ಕೈಹಿಡಿದು ನಡೆದು ಬಂದು
ಎನ್ನೆದೆಯ ಅಂಗಳದಿ ನಿಂದು
ಅಗೋಚರ ಸಂಬಂಧಗಳ ಸದ್ದಾಗದಂತೆ
ಮುರಿದು
ವಿರುದ್ಧ ದಿಸೆಗಳಿಗೆ ನಡೆಯುವಾ
ಜೀವಿಗಳ ನೆನೆದು
ಮನಸು ಆದ್ರಗೊಳ್ಳುತ್ತದೆ
ಜೀವನದ ಅನಿರೀಕ್ಷಿತ ತಿರುವುಗಳನ್ನು
ಅರಿಯಲಾರದೇ
ಕಣಿವೆಯೊಳಗೆ ಕೊನೆಗಾಣಿಸಿದ
ಜೀವಗಳ ನೆನೆದು ತಲ್ಲಣಗೊಳ್ಳುತ್ತದೆ.

ಗರಿಕೆ ಚಿಗುರುವಲ್ಲಿಯೇ
ಬೇಸಿಗೆಯಲಿ
ಬಿರುಕು ಮೂಡಿಸುವ ಭೂಮಿ
ವಸಂತ ಋತುವಿನಲಿ
ಮತ್ತೆ

ಹಸಿರು ಹೊದ್ದು ಮೆರೆಯುವಂತೆ

ನಾನೂ
ನಿಟ್ಟುಸಿರುಗಳ ನಡುವೆ
ಚಲಿಸುವ ಜೀವಿಗಳ ಸಹಿಸಿಕೊಂಡು 
ನಿಶ್ಚಲವಾಗಿ ನಿಂತಿದ್ದೇನೆ
ಜೀವ-ಜೀವಿಗಳಿಗೆ ಸೇತುವೆಯಾಗಿ

Monday, March 16, 2015

ತಲ್ಲಣ

ಈಗೀಗ !!!
ಹೆಚ್ಚಾಗಿ ಎಲ್ಲರೂ
ಫಲಕ ಕಳಚಿಬಿದ್ದು ನಿಂತಿರುವ
ಕಂಬದಂತಹ ಜನರು.....
ಮುಖವೂ ಇಲ್ಲ
ಮುಖವಾಡವೂ ಇಲ್ಲಾ
ಅವರಿವರ ಹಿಂಬಾಲಿಸುವ ಬಾಲಿಶತನದಿ
ಸ್ವಂತಿಕೆಯ ಫಲಕ ಕಳಚಿ
ವ್ಯಕ್ತಿತ್ವದ ದರ್ಶನವೂ ಇಲ್ಲಾ
ಮಾರ್ಗದರ್ಶನ ಗೋ.......ವಿಂದ
ತಂಬಾಕು, ಕಡ್ಡಿಪುಡಿ, ಗುಟ್ಕಾ ತಿಂದು
ಅಲ್ಲಿ-ಇಲ್ಲಿ ಕ್ಯಾಕರಿಸಿ ಉಗಿಯುವಂತೆ
ಬಾಯಿಚಪಲಕೆ
ಘಟಾನುಘಟಿಗಳ ಉದ್ಘೋಶಿಸುವ ಇವರು
ಧರ್ಮದ ಆಫೀಮು ಸೇವಿಸಿದ
ಧರ್ಮಾಂಧರಿಗಿಂತ
ಘಾತಕರು, ಜಗದೋದ್ಧಾರದ ಸೋಗಿನಲಿ ನಲಿಯುವ
ಸ್ವಯಂಘೋಷಿತ ದೇವಮಾನವರು
ಅವರಿವರನ್ನು ತೆಗಳುತ್ತಾ
ರಾತ್ರಿ ಬೆಳಗಾಗುವುದರೊಳಗೆ
ರಾರಾಜಿಸುವ ಹಮ್ಮೀರರು
ಅರ್ಧಂಬರ್ಧ ತುಂಬಿದ ಪಾತ್ರೆ ಚೆಲ್ಲುವದಿಲ್ಲವೇ
ತುಂಬಿದಕೊಡ
ತೃಷೆ ತಣಿಯಲು ಬಯಸುವ ಜೀವಗಳ
ಕಾಯುತ್ತ ಮೂಲೆಯಲಿ
ಮೌನಗೀತೆ ಹಾಡುತ್ತಿತ್ತು......

Monday, January 12, 2015

ಹಾಗೇ ಸುಮ್ಮನೇ.....

ಶರದೃತುವಿನ

ತಣ್ಣಗಿನ ಮುಂಜಾವು
ಉದ್ಯಾನವನದ ಮೂಲೆಯಲ್ಲಿ
ಥರಗುಟ್ಟುವ ಚಳಿಯಲ್ಲಿ ಬೆತ್ತಲಾಗಿ
ನಿಂತಿರುವ ಹೊಂಗೆಯ ಮರ
ವಾಯುವಿಹಾರಕ್ಕೆ
ಬಂದವರ ಪಾದದಡಿಯಲ್ಲಿ
ಚರಚರನೆ ಸದ್ದು ಮಾಡಿ ಕರಗುತ್ತಿರುವ
ಹಣ್ಣೆಲೆಗಳು
ವಸಂತನೊಡನಾಟದಲಿ
ಅರಳಿ, ಹೊರಳಿ
ಪ್ರೇಮಿಗಳ ಪಿಸುಮಾತು, ನರಳಿಕೆಗಳ
ಸಾಕ್ಷಿ
ನಿರ್ದಯವಾಗಿ ತುಳಿದು ಸಾಗುತ್ತಿರುವ
ಪಾದಗಳಡಿಯಲ್ಲಿ
ನಿಧಾನವಾಗಿ
ಮಣ್ಣಿನೊಳಗೊಂದಾಗುತ್ತಿವೆ
ಮರವೋ
ಮೂಕವೇದನೆಯನ್ನನುಭವಿಸುತ್ತಾ
ವೇಷ ಕಳಚಿದ ಪಾತ್ರಧಾರಿಯಂತೆ
ಬರುವ ವಸಂತನಿಗಾಗಿ
ಮತ್ತೆ ಮೆರೆಯುವ ಪಾತ್ರಕಾಗಿ
ಸಜ್ಜುಗೊಳ್ಳುತ್ತಿದೆ
ಗೋಧೂಳಿ ಸಮಯದಿ
ಬೋಳು ಹೊಂಗೆಯ ಮರದಡಿಯಲ್ಲಿ
ಲಲ್ಲೆಗರೆಯುವ ಪ್ರೇಮಿಗಳೂ
ವಿಷಾದಗಳ ಕಳಚಿ, ವಿಸ್ಮಯಗಳ ಪೋಣಿಸುತಾ
ಪಿಸುಮಾತಿನಲಿ
ತುಂಟ ನೋಟದಲಿ, ಮಂದಸ್ಮಿತವರಳಿಸಿ
ಬಣ್ಣ-ಬಣ್ಣದ ಕನಸು ಕಟ್ಟುತ್ತಿದ್ದಾರೆ
ಅವರಿಗೋ
ಋತುಮಾನಗಳ ಹಂಗಿಲ್ಲಾ....