Tuesday, May 20, 2014

ಯಶೋಧರೆ

ಅಂತರಾಳದ
ಜಗುಲಿಯ ಮಧ್ಯದಲಿ
ನಂದಾದೀಪದ ಬೆಳಕು
ಎಣ್ಣೆ-ಬತ್ತಿ, ಹಣತೆಗಳ
ಹಂಗಿಲ್ಲದೇ
ಎಣೆಯಿಲ್ಲದೇ ಬೆಳಗುತಿದೆ

ಸಿದ್ಧಾರ್ಥ
ಮಧ್ಯರಾತ್ರಿಯಲಿ
ಎದ್ದು ಹೋದಾಗಿನಿಂದ.....
ಇರುಳಿನಲಿ
ಮರೆಯಾಗಿ ಹೋದವನ
ದಾರಿಯ ದಿಕ್ಕು-ದೆಸೆಯ ಊಹಿಸಿ
ಬಿಕ್ಕಳಿಸಿದ ಸದ್ದು
ಅವರು ಸಾಗಿದ ದಾರಿಗೆ
ತಡೆಯೊಡ್ಡದಿರಲೆಂದು ಹಗಲಿರುಳೂ
ದುಃಖ ತಡೆಹಿಡಿದು
ಗಂಟಲಿನ ನರಗಳು ಗಂಟುಗಟ್ಟಿವೆ
ಒಂದಿನಿತು ದಿನವಿತ್ತು
ಮರಳಿ ಬರುವನೆಂಬ ಆಶಾಕಿರಣ
ಕಾಲಚಕ್ರದಡಿಯಲಿ ನಲುಗಿ
ಜಗವನೆಲ್ಲಾ ಬೆಳಗಿದ ಬುದ್ಧನ ನೆನೆದು
ನಡುಹಗಲಿನಲ್ಲಿಯೇ
ಅಂಧಕಾರವ ನುಂಗಿರುವೆ.....
ಆದರೂ ಎನ್ನೆದೆಯಲ್ಲಿ ನಂದಾದೀಪ
ಬೆಳಗುತಿದೆ ಅನವರತ....

No comments:

Post a Comment