Thursday, March 31, 2011

ಪ್ರತಿಬಿಂಬ

ಕನ್ನಡ ಕಾವ್ಯಲೋಕದಲ್ಲಿ
ಒಮ್ಮೆ ಕಣ್ಣಾಡಿಸಿ
ನೆತ್ತಿಗೇರಿದ ನವರಸಗಳ
ಭಾವನೆಯನ್ನು
ಮೆಲುಕುಹಾಕುತ್ತಾ
ಎಲ್ಲವನೂ ಅರಿತು
ಅರಗಿಸಿಕೊಳ್ಳುವ ಭಂಗಿಯಲಿ
ಗದ್ದಕ್ಕೆ ಕೈಯೂರಿ
ಕುಳಿತಾಗ......

ಕಾನನದಿ
ಸಣ್ಣ ಝರಿಯೊಂದು
ಕಲ್ಲುಬಂಡೆಗಳ ಬಳಸಿ
ಸಾಗುವಾಗ ಕೇಳಿಸುವಂತೆ
ಕಿಲಕಿಲನೆ ನಕ್ಕ ಸದ್ದು
ತಲೆಯೆತ್ತಿ ನೋಡಿದರೆ
ಎನ್ನ ಕವಿತೆ
ಇಂದು ನಾ ನಿನ್ನ
ಸೆರೆಯಾಗಲಾರೆ ಕವೀ...
"ನೀ ಬರೆಯಲಾರೆ ಎನ್ನ"

ಎನ್ನ ಮುಂದೆಯೇ
ಮೈದಳೆದು ನಿಂತಿರುವ
ಕವಿತೆಯನ್ನು ಕಂಡು
ತಲೆತುಂಬ ತುಂಬಿ
ಮತ್ತೇರಿಸಿದ್ದ
ಕನ್ನಡ ಕಾವ್ಯಗಳ ಪದಗಳು
ಅಲ್ಲಿ-ಇಲ್ಲಿ ಎಲ್ಲೆಲ್ಲಿಯೂ ಬಿದ್ದು
ಒಡೆದ ಕನ್ನಡಿಯ
ಚೂರುಗಳಂತೆ ಚದುರಿಹೋಗಿ
ಭಾವಶೂನ್ಯವೆಲ್ಲ ಮನವ ಆವರಿಸಿ
ಮೈಮರೆತು ನಾ
ಕವಿತೆಯನು ನೋಡುತಿರೆ...

ಮತ್ತೆ ಮೈದಡವಿ
ಪ್ರೇಮದಿಂದಲೇ ನೋಡಿ
ಅವಳೇ ಪೋಣಿಸಿದಳೆನ್ನ
ಮನದ ಭಾವನೆಯ
ಮತ್ತೆ ಮೂಡಿತು ಮನದಿ
ಕವಿತೆಯಾ ಪ್ರತಿಬಿಂಬ....

No comments:

Post a Comment