Wednesday, March 9, 2011

ಸಂವಹನ


ಅಲ್ಲಿ ದೂರದಲ್ಲಿರುವ
ಮಾಮರದ ಅಡಿಯಲ್ಲಿ
ಮ್ಲಾನವದನಳಾಗಿ
ಕಾದಿರುವಳು ಅವಳು
ಅಶೋಕವನದಲ್ಲಿ
ಕುಳಿತಿರುವ ಸೀತೆಯಂತೆ

ಮನದಾಳದಲ್ಲಿ ತುಂಬಿರುವ
ತುಮುಲಗಳನು
ಹಂಚಿಕೊಳ್ಳುವ ಹಂಬಲ
ಮೇಲ್ನೋಟಕ್ಕೆ ಶಾಂತಸಾಗರ
ಯಾವಾಗ ಸಿಡಿಯುವುದೋ
ಜ್ವಾಲಾಮುಖಿ
ವಸುಂಧರೆಯೂ ಅರಿಯಳು


ಅಲ್ಲಿ, ಅವಳ ಪಕ್ಕದಲ್ಲಿ
ಕುಳಿತು ಕುಶಲೋಪರಿ
ಸಂಭಾಷಣೆಯ ಕೇಳುವ
ವ್ಯವಧಾನವಿಲ್ಲವೆನಗೆ
ಆದರೂ ಹರಿಯುತಿದೆ ನಮ್ಮಿಬ್ಬರಲ್ಲಿ
ಭಾವನೆಗಳ ಸಂವಹನ


ಅವಳಿಗೂ ಗೊತ್ತು ....
ಮನದ ದುಗುಡವ ಹೇಳಲು
ಮಾತುಗಳೇ ಬೇಕೆ ?
ಅರಿಯುವ ಮನ ಬೇಕು ಎಂಬುದು
ಅದೇ ನಮ್ಮಿಬ್ಬರ ತಿಳುವಳಿಕೆ
ಕಾಲ ಮೆಲ್ಲಗೆ ಸರಿಯುತಿದೆ.........

1 comment: