Thursday, October 7, 2010

ದೈನಂದಿನ ಪಾಡು

ಮುಂಜಾನೆ ಹಿತವಾದ ಹೊಂಬಿಸಿಲು

ಸೂರ್ಯ ಮಾರುದ್ದ ಮೇಲೇರಿದ ಮೇಲೆ
ತಂಗಾಳಿಯು ಕರಗಿ ಹೋಗಿ
ಕಣ್ಣುಗಳಲಿ ಕತ್ತಲೆ ಬರಿಸುವ ಉರಿಬಿಸಿಲು

ಹಾಗೋ ಹೀಗೋ ನೆರಳಿನಾಸರೆ ಪಡೆದು
ವಿಶ್ರಮಿಸುವ ಹೊತ್ತಿಗೆ
ಧುತ್ತೆಂದು ತುಂತುರು ಮಳೆಯಿಂದ
ಪ್ರತ್ಯಕ್ಷನಾಗುವ ವರುಣ

ರೈತನ ಒಡಲಿನಲ್ಲಿ ಉರಿಯೆಬ್ಬಿಸುವಂತೆ
ಧಾರಾಕಾರವಾಗಿ ಸುರಿಯುವನು
ಬಡವರ ಗುಡಿಸಿಲು, ಮನೆಗಳಲ್ಲಿ
ಎಲ್ಲಿ ನೋಡಿದಲ್ಲಲ್ಲಿ ನೀರೋ-ನೀರು


ತೊಳೆದು ಹೋಗುವುದು
ಕೊಳೆಗೇರಿಗಳ ಕೊಳೆಯು
ಹಾಗೇ ಅಲ್ಲಲ್ಲಿ ಕೂಡಿಟ್ಟಿರುವ
ಬಡ-ಬಗ್ಗರ ಬಟ್ಟೆ-ಬರೆ, ಧಾನ್ಯ

ದಿನವೆಲ್ಲ ತುತ್ತು ಕೂಳಿಗಾಗಿ ದುಡಿದು
ದಣಿದ ದೇಹವನು ಹಾಸಿಗೆಯಲ್ಲಿ ಎಸೆಯುವ
ನೆಮ್ಮದಿಯೂ ಹರಿದುಹೋಗುವುದು
ವರುಣನ ಪ್ರವಾಹದಲ್ಲಿ

No comments:

Post a Comment