Saturday, April 29, 2017

ಸಖೀ ಗೀತ



ಇದು ಕವಿತೆಯಲ್ಲಾ
ಅವಳ
ಇರುವಿಕೆಯ ಗೈರುಹಾಜರಿಗೆ 
ಸಾಕ್ಷಿ ಮಾತ್ರ


ಪ್ರೇಮದನುಭಾವದಲಿ
ತನ್ಮಯವಾಗಿ ತನ್ನಿರವನ್ನೇ ಮರೆತು
ಕಳೆದುಹೋಗಿರುವಾ ಕವಿ
ವಿರಹದಾ ಬೇಗುದಿಯಲಿ ಮೈಮರೆತು
ಬರೆದ ಸಾಲುಗಳೆಲ್ಲಾ
"ಪಲ್ಲವಿ"ಯಲ್ಲಿಯೇ ಲೀನವಾಗಿ
"ಚರಣ"ಗಳು
ಪ್ರೇಮಿಯ ಶರಣಾಗತಿಯ ಸೂಚಿಸುವುದು
ಅವಳ ಗೈರುಹಾಜರಿಗೆ
ಸಾಕ್ಷಿ ಮಾತ್ರ

ಅದೋ ನೋಡಿ
ಅರುಣೋದಯಡಿ ಅರಳಿದಾ ಮಲ್ಲಿಗೆ
ಆ ದೇವನ ಪೂಜೆಗೂ ಸಲ್ಲದೆ
ಅವಳ ಮುಡಿಗೂ ಏರದೆ
ಬಳ್ಳಿಯಲ್ಲಿಯೇ ಬಾಡಿ ಉದುರಿ
ಧರಾಶಾಹಿಯಾಗಿರುವುದು
ಅವಳ ಗೈರುಹಾಜರಿಗೆ
ಸಾಕ್ಷಿ ಮಾತ್ರ

ಏಕಾಂತದಲಿ, ಜನಜಂಗುಳಿಯಲಿ
ಅವಳ ನೆನಪುಗಳ ದಾಳಿಗೆ ಸಿಲುಕಿ, ನಲುಗಿ
ಕಾರಣವಿಲ್ಲದೆ ಮೊಗದಲಿ ಮಂದಹಾಸ ಬೀರಿ
ಮರುಕ್ಷಣದಲ್ಲಿಯೇ
ವ್ಯಗ್ರನಾಗಿ ಹುಬ್ಬುಗಳ ಗಂಟಿಕ್ಕಿ
ಅನ್ಯಮನಸ್ಕತೆಯಿಂದಾ
ತನ್ನಿರವನ್ನೇ ಮರೆತು ಮೈಮರೆತು
ಶೂನ್ಯದಲಿ ಅವಳ ಪ್ರತಿರೂಪ ಕಾಣುವುದು
ಅವಳ ಗೈರುಹಾಜರಿಗೆ
ಸಾಕ್ಷಿ ಮಾತ್ರ

No comments:

Post a Comment