Tuesday, February 25, 2014

ಹಾಗೇ ಸುಮ್ಮನೇ....

ಗಲ್ಲು ಶಿಕ್ಷೆಗೆ ಆಣಿಯಾಗಿ
ಕೊನೆಯ ಕ್ಷಣಗಳನೆಣಿಸುತ
ಭಾವರಾಹಿತ್ಯದಿ
ನಿಟ್ಟುಸಿರು ಬಿಡುವ ಕೈದಿಯಂತೆ
ಅನಾಥವಾಗಿ ಬಿದ್ದಿರುವ ಕಾಗದ....
ಎನ್ನ ಮನದ ಅಳಲು
ಅದರೊಡಲಾಳದ ಕಳವಳಗಳಿಗೆ
ಆಯಾಮಗಳು ಹಲವು....

ಅದೂ-ಇದೂ ಬರೆದು
ಶೋಧನೆ, ಸಂಶೋಧನೆಯ
ವಿಮರ್ಶೆ, ಪರಾಮರ್ಶೆಯ ಹೆಸರಿನಲಿ
ಎದೆ ಮೇಲೆ ಬಿದ್ದ ಅಕ್ಷರಗಳ
ಜೊತೆಗೆ
ಉದ್ದ-ಅಡ್ಡ, ಅಕ್ಕ-ಪಕ್ಕ
ಎಲ್ಲೆಂದರಲ್ಲಿ ಗೀಚಿಸಿಕೊಂಡು
ನಾಲ್ಕಾರು ಕರಗಳ ಸೋಕಿ
ರದ್ದಿಯಾಗಿ
ಜೀವಾವಧಿ ನಿತ್ಯ ಸಾಯುವ ಬದಲು
ಗಲ್ಲು ಶಿಕ್ಷೆಯನೇನೋ ಬಯಸೀತು....

ಆದರೇ
ಎನ್ನ ಮನದಲಿ ಕೈದಿಗೆ ತೋರುವ
ತೃಣ ಮಾತ್ರ ಕನಿಕರವೂ ಮೂಡದು
ಅದರ ಕೊನೆಯಾಸೆ ಕೇಳಲಾರೆ
ಒಂದು ವೇಳೆ ಕೇಳಿದರೇ
ಹೇಳೀತು
ಮಕ್ಕಳ ಕೈಯೊಳಗೆ ಕೊಟ್ಟರೇ
ಬಾನಿನುದ್ದಲಕೂ
ಹಾರುವ ಗಾಳಿಪಟವೋ
ಹರಿವ ನೀರಿನ ಮೇಲೆ ನಲಿದಾಡುವ
ಹಾಯಿ ದೋಣಿಯೋ ಆಗಿ
ಮಕ್ಕಳ ಮುಖದ ಮಂದಸ್ಮಿತದಲಿ
ಕೊನೆಯುಸಿರೆಳೆಯುವಾ
ಹುನ್ನಾರ ಹೂಡೀತೆಂಬ ಕಳವಳ....

ಅದಕೇ...
ಏನೇನೋ ಮಣ್ಣಂಗಟ್ಟಿ ಪದಗಳನೆರಚಿ
ಅದರ ಹಣೆಬರಹ ಬರೆಯುವ ತವಕ
ನವರಸಗಳ ಸೋಸಿ
ನಾಲ್ಕಾರು ಸಾಲುಗಳ ಬರೆದು
ಕವಿತೆಯೆಂಬ ಭಾವವನು ಮೆರೆಸಿಯೇನು...
ಆದುವೇ...
ಅದರ ಚರಮಗೀತೆ....

No comments:

Post a Comment