Saturday, April 7, 2012

ಪ್ರಕೃತಿ

ಬೆಟ್ಟದ ಮೇಲೆ
ಕಿರೀಟ ತುರಾಯಿಯಂತೆ
ಸಾಲು ಸಾಲು
ಮರಗಳ ತೋಪು
ಮುಂಜಾನೆ, ಮಧ್ಯಾಹ್ನ
ಸಂಜೆ ಹೊತ್ತಿನಲ್ಲಿ
ಸೂರ್ಯರಶ್ಮಿಯು
ಗಿಡ-ಮರಗಳ ರೆಂಬೆಕೊಂಬೆಗಳು
ದಟ್ಟಹಸಿರಿನ ನಡುವೆ
ತೂರಿ ಬುರುವಾಗ
ಮೂಡುವ ಸಪ್ತವರ್ಣದ ಚಿತ್ರ

ಅವರು ಬಂದರು
ಮೊದ-ಮೊದಲು
ಅಲ್ಲಲ್ಲಿ ಮುರಿದು ಬಿದ್ದ
ರೆಂಬೆ-ಕೊಂಬೆಗಳ ಎತ್ತಿಕೊಂಡರು
ಅವರಿವರ ಮನೆಯ ಪಡಸಾಲೆಯಲ್ಲಿ
ಕುರ್ಚಿ-ಮಂಚಗಳು
ಮೋಜು ಮಾಡಲು ಮೇಜವಾನಿಗಳು
ಅಲಂಕರಿಸಿದವು
ಉಳಿದ ತುಂಡುಗಳೆಲ್ಲ
ಅನ್ನ ಬೇಯಿಸಲು ಬೂದಿಯಾದವು

ಮತ್ತೊಬ್ಬರು
ಬೆಟ್ಟದ ಮೇಲೆ ಇರುವ
ದೇವಳಕೆ ಸಾಗುವ ಕಾಲು ದಾರಿಯಲ್ಲಿ
ನೆರಳಾಗಿದ್ದ ಮರಗಳನು
ಟಾರು ರಸ್ತೆಯನು ಮಾಡಲು
ಭಕ್ತಿಯಿಂದ ಕತ್ತರಿಸಿದರು
ಕೆಲಕಾಲ ಹಕ್ಕಿಪಿಕ್ಕಿಗಳೆಲ್ಲ
ಮೌನವಾಗಿ ರೋದಿಸಿದವು
ಮತ್ತೆ ಮಾನವನ ಆಕ್ರಮಣಕೆ
ಭಯಬಿದ್ದು ಬೇರೆ ನೆಲೆ
ಅರಸುತ್ತ ಮರೆಯಾದವು

ಬೆಟ್ಟದ ದೇವರ ಮಹಿಯೆನು
ಸಾರಲೊಬ್ಬ ಪೂಜಾರಿ
ತನಗೊಂದು ಗೂಡು ಮಾಡಲು
ಬೋಳಿಸಿದ ಕೆಲವು ಮರಗಳನು
ಮಂತ್ರಿ-ಮಹೋದಯರು
ಭಟ್ಟಂಗಿಗಳ ಮಾತು ಕೇಳಿ
ಮಾಡಿದರು
ಚಂಡಿಕಾ ಹೋಮ
ಮರಗಳೆಲ್ಲವೂ ಆಹುತಿಯಾದವು
ಬಯಲಾಯಿತು ಬೆಟ್ಟ
ಪುಣ್ಯ ಕ್ಷೇತ್ರವನು ಜಗಕೆಲ್ಲ
ತೋರಿಸಲು ಸಾರಿದರು ಕೋಟಿ-ಕೋಟಿ

ದರಕಾರವಿಲ್ಲದ ಸರಕಾರಿ ಕೆಲಸ
ಕಾಮಗಾರಿಯಲಿ
ಎಲ್ಲೋ ಕೇಳಿದ ಟಣ್-ಟಣ್ ಸದ್ದು
ಮಂತ್ರಿಮಹೋದಯರ
ಚಮಚಾಗಳಿಗೆ ಗಣಿಗಾರಿಕೆಯ ಹಸಿವು
ಬೆತ್ತಲಾದ ಬೆಟ್ಟದಾ
ಬುಡಕ್ಕೇ ಗುದ್ದಲಿ-ಸಲಿಕೆ
ಪಿಕಾಸುಗಳ ಪೂಜೆ
ಜೆಸಿಬಿ ಯಂತ್ರಗಳ ಸದ್ದು
ದೂರದಿಂದ ಕೇಳಿಸುತ್ತಿದೆ
ಪೂಜೆಯ ಘಂಟೆ
ಯಂತ್ರರಾಕ್ಷಸರ ಸದ್ದು
ಯಾರಿಗೂ ಕೇಳುತ್ತಿಲ್ಲ
ಪ್ರಕೃತಿಯ ನರಳಾಟ......

No comments:

Post a Comment