Saturday, March 16, 2013

ಹೀಂಗsssss ಒಮ್ಮೊಮ್ಮೆ....

ಒಬ್ಬ ವ್ಯಕ್ತಿಯ ಆಸಕ್ತಿ, ಹವ್ಯಾಸಗಳು ಎಷ್ಟೇ ಅಪರಿಮಿತವಾಗಿದ್ದರೂ ಅವುಗಳನ್ನು ವ್ಯಕ್ತಪಡಿಸುವ ಮಾಧ್ಯಮಗಳು ಅವಶ್ಯಕ, ತೋಚಿದ್ದನ್ನೆಲ್ಲ ಗೀಚುವ ವ್ಯಕ್ತಿಯಾಗಿರುವ ನಾನು, ನನ್ನ ಆಸಕ್ತಿಗೆ ಅನುಗುಣವಾದ, ಸೂಕ್ತವಾದ ಸ್ನೇಹಿತರು ಬಳಗವನ್ನು ಅವಲಂಬಿಸಿರುತ್ತೇನೆ. ಸಮಾನ ಮನಸ್ಕರ ವೇದಿಕೆಯೊಂದು ಪರಸ್ಪರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದರಲ್ಲಿ ಸಂಶಯವಿಲ್ಲ. ಹೀಗೆ ಒಂದು ವೇದಿಕೆಯಲ್ಲಿ ಸೇರಿದ ಗೆಳೆಯರ ಬಳಗ ಕೆಲವು ಅನವಶ್ಯಕ ಘಟನೆಗಳು, ಅಹಿತಕರ ಪ್ರತಿಕ್ರಿಯೆಗಳು ಮುಂತಾದ ಕಾರಣಗಳಿಂದ ಅನುಕೂಲಕರ ವಾತಾವರಣ ಅರಸಿ, ಅನ್ವೇಷಣೆಯಲ್ಲಿ ಪುನಃ ಮತ್ತೊಂದು ವೇದಿಕೆಯತ್ತ ಮುಖ ಮಾಡುವುದು ಬೆಳವಣಿಗೆಗೆ ಸರಿಯಾದ ವಿಚಾರವಾದರೂ ಇದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತ ಹೋದರೆ ಪಲಾಯನವಾದಕ್ಕೆ ಸಿಲುಕುವ ಅಪಾಯವಿರುತ್ತದೆ.
ಲೋಕದಲ್ಲಿ ವಿಧ-ವಿಧ ವ್ಯಕ್ತಿಗಳು, ವಿವಿಧ ಅಭಿಪ್ರಾಯಗಳು, ಪೂರಕ-ಮಾರಕ ಪ್ರತಿಕ್ರಿಯೆಗಳು ಸಹಜವಾದದ್ದು. ನಾವು ನಡೆಯುವಾಗ ರಸ್ತೆಯಲ್ಲಿ ಬಿದ್ದಿರುವ ಕಸ-ಕಡ್ಡಿ, ಮಲಿನ ಪದಾರ್ಥ, ಕಲ್ಲು-ಮುಳ್ಳು(ಮೆಟ್ರೋ ನಗರದಲ್ಲಿ ಇರುವದಿಲ್ಲ) ಗಳನ್ನು ದಾಟಿ ಮುನ್ನಡೆಯುವಂತೆ, ಬಾಳ ಪಯಣದಲ್ಲಿ ಋಣಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ ಮುನ್ನಡೆಯಬೇಕು. ಹಾಗೆಯೇ ನಮ್ಮ ಪಯಣದಲ್ಲಿ ನಮ್ಮ ಮನಸ್ಸಿಗೆ ಮುದ ನೀಡುವ ಹೂವಿನ ಪರಿಮಳ, ಚಿಟ್ಟೆಗಳ ಹಾರಾಟ, ದೂರದಿಂದ ಕೇಳಿ ಬರುವ ಸಂಗೀತ, ಆಗಸದಲ್ಲಿ ಕಾಣುವ ಮೋಡಗಳ ಚಿತ್ತಾರ, ತುಂತುರು ಮಳೆ ಮುಂತಾದವುಗಳನ್ನು ಸವಿಯುವಂತೆ ಅನುಕೂಲಕರ ಸಂಗತಿಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ನಮಗೆ ಯಾವುದು ಸೂಕ್ತ ಎಂಬುದನ್ನು ನಾವು ನಿರ್ಧರಿಸಬೇಕು. ಕೆಲವು ಸಂದರ್ಭದಲ್ಲಿ ನಮಗೆ ಅನುಕೂಲಕರ ಪ್ರತಿಕ್ರಿಯೆ, ಅಭಿಪ್ರಾಯಗಳು ದೊರಕದಿದ್ದರೆ ಮನಸು ವಿಹ್ವಲಗೊಳ್ಳದಂತೆ ನಿಯಂತ್ರಿಸಿ, ಈ ತೆರನಾದ ಘಟನೆಗಳಿಗೆ ಕಾರಣವಾದ ಅಂಶಗಳನ್ನು ಅರಿಯುವ ಸಾಮರ್ಥ್ಯ ಪಡೆಯಬೇಕು. ಆತ್ಮಾವಲೋಕನದ ಇಂತಹ ಸಾಮರ್ಥ್ಯ ನಿಧಾನವಾಗಿ ಸಿದ್ಧಿಸುವುದಾದರೂ ಒಮ್ಮೆ ಮನೋ ನಿಯಂತ್ರಣ ಸಾಧಿಸಿದರೆ, ಪರನಿಂದೆ ನಮ್ಮನೆಂದೂ ಬಾಧಿಸದು.
ನಮ್ಮ ಎದುರಿಗೆ ಇರುವ ವ್ಯಕ್ತಿ ಆ ಇನ್ನೊಬ್ಬರು ಆ ರೀತಿಯಲ್ಲಿ ಋಣಾತ್ಮಕ ಪ್ರತಿಕ್ರಿಯೆ ನೀಡಲು ಕಾರಣವೇನು ? ಇಂತಹ ಸ್ಥಿತಿಗೆ ಕೇವಲ ಎರಡು ಸಾಧ್ಯತೆಗಳು ಇರುತ್ತವೆ. ಒಂದೋ ನಮ್ಮ ಅಭಿಪ್ರಾಯ, ಅಭಿವ್ಯಕ್ತಿ ದೋಷಪೂರಿತವಾಗಿರಬಹುದು ಇದನ್ನು ನಿವಾರಿಸಲು ಆತ್ಮಾವಲೋಕನ ಅವಶ್ಯಕ. ನಮ್ಮ ಬೆನ್ನಹಿಂಬದಿ ನಮಗೆ ಕಾಣದಿರುವಂತೆ, ನಮ್ಮ ದೋಷಗಳೂ ಸಹ ನಮಗೆ ಸ್ಪಷ್ಟವಾಗಿ ನಮಗೆ ಗೋಚರಿಸುವದಿಲ್ಲ. ಬೇರೆಯವರು ಹೇಳಿದ್ದನ್ನು ಕುರಿತು ಶಾಂತ ಮನಸಿನಿಂದ ಸ್ವಲ್ಪ ಯೋಚಿಸಿದರೆ, ನನ್ನತನವನ್ನು ಬಿಟ್ಟು ಅವರ ಸ್ಥಾನದಲ್ಲಿ ನಿಂತು ಯೋಚಿಸಿದರೆ, ಪ್ರಾಯಶಃ ನಮ್ಮ ದೋಷಗಳು ನಮಗೆ ಗೋಚರಿಸಬಹುದು. ಇನ್ನೊಂದು ಸಂಭಾವ್ಯತೆ ನಮ್ಮ ಎದುರಿನ ವ್ಯಕ್ತಿಯ ವಿಚಾರಗಳು ದೋಷಪೂರ್ಣವಾಗಿದ್ದರೆ ಒಂದೆರಡು ಸಾರಿ ಅವರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳಬಹುದು. ವೈಚಾರಿಕ ಸಂಗತಿಗಳನ್ನು ವಿವರಿಸುವ ನಮ್ಮ ಪ್ರಯತ್ನಗಳು ಫಲ ನೀಡದಿದ್ದರೆ, ಅವರ ಪಾಡಿಗೆ ಅವರನ್ನು ಬಿಟ್ಟು ನಮ್ಮ ಪಯಣ ಮುಂದುವರೆಸುವುದು ಸೂಕ್ತ.
"ಲೋಕೋಭಿನ್ನ ರುಚಿ" ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಅವರವರ ಭಾವಕ್ಕೆ ತಕ್ಕಂತೆ ರುಚಿ-ಅಭಿರುಚಿ ಬದಲಾಗುತ್ತ ಹೋಗುತ್ತವೆ. ರಸ್ತೆ ಬದಿಯಲ್ಲಿ ಕಳ್ಳೇಕಾಯಿ ಮಾರುವವನಿಂದ ಎರಡು ರೂಪಾಯಿಯ ಶೇಂಗಾ ಬೀಜ ತಿನ್ನುವ ವ್ಯಕ್ತಿಯ ಸಂತೃಪ್ತಿ ಹಾಗೂ ತಾರಾ ಮೌಲ್ಯದ ಹೋಟಲ್ ಒಂದರಲ್ಲಿ ಹೋಗಿ ವಿವಿಧ ತಿಂಡಿ-ತಿನಿಸುಗಳನ್ನು ತಿನ್ನುವ ವ್ಯಕ್ತಿಯ ಸಂತೃಪ್ತಿಯ ಮಟ್ಟ ಒಂದೇ ಆಗಿರುತ್ತದೆ. ಹೊಟ್ಟೆಗೆ ಏನಾದರೂ ಹಾಕಬೇಕು, ಬಡವನಿರಲಿ-ಸಿರಿವಂತನಿರಲಿ ಎಲ್ಲರದೂ ಹೊಟ್ಟೆಪಾಡಿನ ಜೀವನವೇ. ಹಸಿವು ಎನ್ನುವುದು ಕೆಲವರಿಗೆ ತೀವ್ರವಾಗಿರುತ್ತದೆ ಇನ್ನು ಕೆಲವರಿಗೆ ಹಸಿವಿನ ಭಾವನೆಗಳು ಬೇರೆಯಾಗಿರುತ್ತದೆ. ಬಡವನ ಹಸಿವು ಹೊಟ್ಟೆಹೊರೆಯುವುದಾದರೆ ಕೆಲವರಿಗೆ ಧನ-ಕನಕ ಗಳಿಸುವ ಹಸಿವು, ಕೆಲವರಿಗೆ ಹೆಸರು ಗಳಿಸುವ ಹಸಿವು ಹೀಗೇ ವ್ಯಕ್ತಿಯಿಂದ ವ್ಯಕ್ತಿಯ ರುಚಿ-ಅಭಿರುಚಿ ಬದಲಾವಣೆಗೊಳ್ಳುತ್ತವೆ.
ಎಲ್ಲರೂ ನಮ್ಮಂತೆಯೇ ಇರಬೇಕು, ನಮ್ಮ ಮಟ್ಟದ ಯೋಚನೆ-ಆಲೋಚನೆಯನ್ನು ಹೊಂದಬೇಕು, ನಮ್ಮ ವಿಚಾರ ಮೌಲ್ಯಗಳನ್ನು ಅರಿಯಬೇಕು-ಅನುಸರಿಬೇಕು ಎಂಬುವದು ಎಲ್ಲರೂ ಬಯಸುವ ವಿಷಯವೇ. ಇಂತಹ ವಾತಾವರಣ ನಿರ್ಮಾಣವಾಗಬೇಕಾದರೆ ಒಂದೋ ನಾವು ಅವರ ಮಟ್ಟದಲ್ಲಿ ಸಂವಹನ ನಡೆಸಬೇಕು ಇಲ್ಲವಾದರೆ ಅವರನ್ನು ನಮ್ಮ ಮಟ್ಟಕ್ಕೆ ಏರುವಂತೆ ಬೆಳವಣಿಗೆಗೆ ಪೂರಕವಾಗಿ ವಷಯಗಳನ್ನು ಮನದಟ್ಟಾಗುವಂತೆ ಹೇಳುವದನ್ನು ಕಲಿಯಬೇಕು. ಜೀವನದ ಪಾಠಶಾಲೆ ಮರಣದವರೆಗೂ ಕೊನೆಗೊಳ್ಳುವದಿಲ್ಲ ಅಲ್ಲವೇ......

1 comment:

  1. ಚೆನ್ನಾಗಿದೆ ಬರಹ, ಉತ್ತಮ ಮೌಲ್ಯಗಳ ಬಗ್ಗೆ ಹೇಳುತ್ತಾ ಮರಣದವರೆಗೆ ಕಲಿಕೆಗೆ ಸಾವಿಲ್ಲ ಎನ್ನುವುದನ್ನ ಒತ್ತಿ ಹೇಳುತ್ತದೆ ,ನಿಮ್ಮ ವಿಚಾರಗಳು ನಿಮ್ಮದೇ ಸ್ತರದಲ್ಲಿ ಜನರಿಗೆ ಅರ್ಥವಾಗಬೇಕಾದರೂ ,ಅವರವರ ಭಾವಕ್ಕೆ ತಕ್ಕ ಹಾಗೆ ಹೊಸ ರೂಪ ಪಡೆಯಲಿ ಬಿಡಿ ,ಮುಂದಿನ ಬರಹಗಳಿಗೆ ಶುಭಾಕಾoಕ್ಷೆಗಳು

    ReplyDelete